CHIKKANAYAKANAHALLI : ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ. ಆದ್ರೆ ರಾಜ್ಯದ ಜನತೆಗೆ ಹತ್ತಾರು ಭಾಗ್ಯಗಳನ್ನ ನೀಡಿರೋ ಸರ್ಕಾರ ಆರೋಗ್ಯ ಭಾಗ್ಯವನ್ನ ನೀಡುವ ವಿಚಾರದಲ್ಲಿಯೇ ನಿರ್ಲಕ್ಷ್ಯ ವಹಿಸ್ತಿದ್ಯಾ ಅನ್ನೋ ಪ್ರಶ್ನೆ ಇದೀಗ ಮೂಡ್ತಾ ಇದೆ. ಯಾಕಂದ್ರೆ ರಾಜ್ಯದ ಎಷ್ಟೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾ ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಿತಿ ಕೂಡ ಇದರಿಂದ ಹೊರತಾಗಿಲ್ಲ.
ಹೌದು..ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಅಲ್ಲಿನ ಸ್ತಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಬರಕನಹಾಲ್ ಗ್ರಾಮದ ರಸ್ತೆ ಬದಿಯಲ್ಲಿ 65 ವರ್ಷದ ಬಡ ವೃದ್ಧೆಯೊಬ್ಬರು ತಲೆ ಸುತ್ತಿ ಬಿದ್ದಿದ್ರು. ಮದ್ಯಾಹ್ನದ ಹೊತ್ತು ಈ ಘಟನೆ ನಡೆದಿದ್ರೂ ಯಾರೊಬ್ಬರೂ ಆ ವೃದ್ಧೆಯ ಸಹಾಯಕ್ಕೆ ಬಂದಿರಲಿಲ್ಲ.
ಈ ವೇಳೆ ತಿಮ್ಮನಹಳ್ಳಿ ಗ್ರಾಮದ ಶಿವ ಮತ್ತು ದರ್ಶನ್ ಎಂಬ ಯುವಕರು ಮಾನವೀಯತೆ ಮೆರೆದಿದ್ರು. ತಲೆ ಸುತ್ತಿ ಬಿದ್ದಿದ್ದ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ರು. ಅಂಬುಲೆನ್ಸ್ಗೆ ಕರೆ ಮಾಡಿದರಾದ್ರೂ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣ ಖಾಸಗಿ ಆಟೋ ಮುಖಾಂತರ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗ್ತಿದ್ದಂತೆ ಶಾಕ್ ಎದುರಾಗಿತ್ತು.
ತುರ್ತು ಚಿಕಿತ್ಸೆಗೆಂದು ಅಜ್ಜಿಯನ್ನ ಕರೆದುಕೊಂಡು ಆಸ್ಪತ್ರೆಗೆ ಹೋದ್ರೆ ಅಲ್ಲಿ ವೈದ್ಯರೂ ಇರಲಿಲ್ಲ, ಸಿಬ್ಬಂದಿಯೂ ಇರಲಿಲ್ಲ. ಸುಮಾರು ಅರ್ಧ ಗಂಟೆ ಕಾದ್ರೂ ಯಾರೂ ಬಂದಿರಲಿಲ್ಲ. ಸುಮಾರು ಅರ್ಧ ಗಂಟೆ ಕಾದ ಬಳಿಕ ನರ್ಸ್ ಬಂದು ಚಿಕಿತ್ಸೆ ಕೊಡುವ ಕೆಲಸ ಮಾಡಿದ್ದಾರೆ.
ಇನ್ನು ಇದು ಕೇವಲ ಹುಳಿಯಾರು ಆಸ್ಪತ್ರೆಯ ಪರಿಸ್ಥಿತಿಯಲ್ಲ. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಯೂ ಹೀಗೆಯೇ ಇದೆ. ಸರ್ಕಾರ ಈ ಆಸ್ಪತ್ರೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನೇನೋ ಕಟ್ಟಿಸಿಕೊಟ್ಟಿದೆ. ಆದ್ರೆ ಇಲ್ಲಿ ಜನರಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರೇ ಇಲ್ಲ, ಸಿಬ್ಬಂದಿಯೇ ಇಲ್ಲ ಅಂತಾದ್ರೆ ಆಸ್ಪತ್ರೆ ಇರೋದಾದ್ರೂ ಯಾಕೆ ಅನ್ನೋದು ಸಾರ್ವಜನಿಕರ ಪ್ರಶ್ನೆ.