ಶಿರಾ :
ಶಿರಾ ನಗರದ ಜನತೆಗೆ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಕಾಟ ಹೆಚ್ಚಾಗ್ತಾ ಇದ್ದು, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕೂತಿದ್ದಾರೆ. ಬಿಡಾದಿ ದನಗಳ ಉಪಟಳದಿಂದಾಗಿ ಪಾದಚಾರಿಗಳು, ವಾಹನ ಚಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟ ಪಡುವಂತಾಗಿದ್ದು, ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.
ಶಿರಾ ನಗರದ ಮಾರುಕಟ್ಟೆ, ವಿವಿಧ ರಸ್ತೆ ಸೇರಿದಂತೆ ನಗರದ ಪ್ರಮುಖ ದೇವಸ್ಥಾನ, ಪಾರ್ಕ್, ಬಟ್ಟೆ ಅಂಗಡಿ, ಆಸ್ಪತ್ರೆ ಎದುರು ಖಾಲಿ ಇರುವ ಜಾಗ, ಶಾಲೆ, ಕಾಲೇಜಿನ ಆವರಣಗಳಲ್ಲಿ ದನಗಳು ಬೇಕಾಬಿಟ್ಟಿ ಗುಂಪು ಗುಂಪಾಗಿ ಅಲೆದಾಡುತ್ತಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಓಡಾಡಲು ಭಯಪಡುವಂತಾಗಿದೆ. ಇನ್ನು ವಾಹನಗಳಿಗೆ ಬಿಡಾಡಿ ದನಗಳು ಅಡ್ಡ ಬರ್ತಾ ಇದ್ದು, ಅಪಘಾತಗಳನ್ನು ತಪ್ಪಿಸಲು ಹೋಗಿ ತಾವೇ ಗಾಡಿಗಳಿಂದ ಬಿದ್ದು ಕೈ ಕಾಲು ಮುರಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ.
ಬಿಡಾಡಿ ದನಗಳಿಂದ ಸಾಕಷ್ಟು ತೊಂದರೆ ಆಗ್ತಾ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡಂತೆ ಇದ್ದಾರೆ. ಇನ್ನಾದರೂ ಅಧಿಕಾರಿಗಳು ಬಿಡಾಡಿ ದನಗಳಿಗೆ ಬ್ರೇಕ್ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.