TUMAKURU NEWS : ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಜೂನ್ 15 ರಿಂದ 30 ರವರೆಗೆ “ಧರ್ತಿ ಆಬ ಜನ್ಜಾತೀಯ ಗ್ರಾಮ್ ಉತ್ಕರ್ಷ್ ಅಭಿಯಾನ್” ಅಡಿ ಗ್ರಾಮ ಮಟ್ಟದ ಶಿಬಿರಗಳನ್ನು ಆಯೋಜಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೇವೆಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ನೆನ್ನೆ ಸಂಜೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ತುಮಕೂರು ತಾಲ್ಲೂಕಿನ ಲಿಂಗೇನಹಳ್ಳಿ, ದೊಡ್ಡವೀರನಹಳ್ಳಿ, ಕುಪ್ಪೂರು; ಕೊರಟಗೆರೆ ತಾಲ್ಲೂಕಿನ ಹಂಚಿಹಳ್ಳಿ; ಸಿರಾ ತಾಲ್ಲೂಕಿನ ಕುಂಬಾರಹಳ್ಳಿ, ಮಾರಗೊಂಡ ನಹಳ್ಳಿ, ಬಟ್ಟಿಗಾನಹಳ್ಳಿ, ಸಿದ್ದಲಿಕೋಣ, ಜೋಡಿದೇವರಹಳ್ಳಿ, ಸಲುಪರಹಳ್ಳಿ; ಪಾವಗಡ ತಾಲ್ಲೂಕಿನ ದಳವಾಯಿಹಳ್ಳಿ, ಹೊಸದುರ್ಗ, ಹನುಮನಬೆಟ್ಟ, ರಂಗಸಮುದ್ರ, ಹನುಮಂತನಹಳ್ಳಿ, ಹೊಟ್ಟೆಬೊಮ್ಮನಹಳ್ಳಿ, ಬೆಳ್ಳಿಬಟ್ಟಲು; ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ, ವಿಠಲಪುರ, ಗುಟ್ಟೆ, ಮುತ್ಯಾಲಮ್ಮನಹಳ್ಳಿ; ಗುಬ್ಬಿ ತಾಲ್ಲೂಕಿನ ಉಂಗನಾಲ, ಕಲ್ಲುಗುಡಿ, ಜಾಲಗುಣಿ, ಸಾಗಸಂದ್ರ; ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೊಡ್ಡಹುಲ್ಲೇನಹಳ್ಳಿ, ಮಾದಾಪುರ, ಹಂದಿಗನಡು, ಜಾಣೇಹಾರ್ ಒಳಗೊಂಡAತೆ ಒಟ್ಟು ೨೯ ಗ್ರಾಮಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕೆಂದು ಸೂಚಿಸಿದರು.
ಕಂದಾಯ, ಕೃಷಿ, ಆರೋಗ್ಯ, ಆಹಾರ ಮತ್ತು ನಾಗರಿಕ ಸರಬರಾಜು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಧರ್ತಿ ಆಬ ಜನ್ಜಾತೀಯ ಗ್ರಾಮ್ ಉತ್ಕರ್ಷ್ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ನಿರ್ದೇಶಿಸಿದರು.
ಶಿಬಿರದಲ್ಲಿ ಪರಿಶಿಷ್ಟ ವರ್ಗಗಳ ಸಮುದಾಯದ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಯುಷ್ಮಾನ್ ಭಾರತ ಕಾರ್ಡ್, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಿಎಮ್-ಕಿಸಾನ್ ಕ್ರೆಡಿಟ್ ಕಾರ್ಡ್, ಜನ-ಧನ್ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು ಸಾಮಾಜಿಕ ಭದ್ರತಾ ಯೋಜನೆಗಳು-ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು-ಒಉಓಖಇಉಂ, ಪಿಎಮ್ ವಿಶ್ವಕರ್ಮ, ಮುದ್ರಾ ಸಾಲಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ-ಪಿಎಂ ಮಾತೃ ವಂದನ ಯೋಜನೆ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದರು.
ಈ ಅಭಿಯಾನವನ್ನು 17 ಇಲಾಖೆಗಳ ಸಹಯೋಗದೊಂದಿಗೆ 2024 - 25ನೇ ಸಾಲಿನಿಂದ 2028 - 29ನೇ ಸಾಲಿನವರೆಗೆ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರಲ್ಲದೆ, ಗ್ರಾಮ ಮಟ್ಟದ ಶಿಬಿರಗಳಲ್ಲಿ ಎಲ್ಲಾ ಪರಿಶಿಷ್ಟ ವರ್ಗದ ಜನಾಂಗದವರು ಭಾಗವಹಿಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಅವರು ಮನವಿ ಮಾಡಿದರು.
ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ಧರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಹಾಗೂ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಚೈತನ್ಯ ಕಂಚಿಬೈಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.