ಶಿರಾ:
ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್ ಶೇಡ್ಡಿಂಗ್ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ. ಬೆಸ್ಕಾಂ ಅಧಿಕಾರಿಗಳು ನಿತ್ಯ 5 ಗಂಟೆ ವಿದ್ಯುತ್ ಕೊಡ್ತೀವಿ ಅಂತಾರೆ ಆದರೆ, ಆಗೊಮ್ಮೆ ಈಗೊಮ್ಮೆ ಅರ್ಧ ಗಂಟೆ ಮಾತ್ರ ಕರೆಂಟ್ ಕೊಡ್ತಾರೆ, ಅಂತಾ ಬುಕ್ಕಾ ಪಟ್ಟಣ ಹೋಬಳಿ ಮಾದೇನಹಳ್ಳಿಯ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿ ಮಾದೇನಹಳ್ಳಿಯ ರೈತರು ವಿವಿಧ ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೆ ಕಂಗಲಾಗಿದ್ದು, ಬೆಸ್ಕಾಂ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ರೈತರು ಅಧಿಕಾರಿಗಳಿಗೆ ತಮ್ಮ ಬೇಡಿಕೆಯನ್ನು ಸಲ್ಲಿಸಿದರು. ಶಿರಾ ತಾಲೂಕಿನ ಬುಕ್ಕಾಪಟ್ಟಣದ ಮಾದೇನ ಹಳ್ಳಿಯಲ್ಲಿ ರೈತರು ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಬರಗಾಲ ಆವರಿಸಿದ್ದು ಈಗ ಮಳೆಯೂ ಇಲ್ಲ. ಹೀಗಾಗಿ ಬೋರ್ವೆಲ್ನಿಂದ ನೀರು ಹರಿಸಲು ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಬೆಳೆಗಳು ಒಣಗುತ್ತಿವೆ. ಅಧಿಕಾರಿಗಳು ಕರೆಂಟ್ ಕೊಡ್ತೀವಿ ಅಂತಾರೇ ಆದರೆ ಸರಿಯಾಗಿ ಕರೆಂಟ್ ಕೊಡ್ತಾ ಇಲ್ಲ ಅಂತಾ ಆಕ್ರೋಶ ಹೊರಹಾಕಿದರು.
ಬರಗಾಲ ಕಾಲವಾಗಿದ್ದರಿಂದ ನಿತ್ಯ 7 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದರು. ಒಂದು ವೇಳೆ ಕರೆಂಟ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.