ಮೈಸೂರು : ಕರ್ನಾಟಕದ ಕಾವೇರಿ ನದಿಯ ತೀರದಲ್ಲಿ ನೆಲೆಸಿರುವ ಚುಂಚಣಕಟ್ಟೆಯ ಧನುಷ್ಕೋಟಿ ಜಲಪಾತ ಇತ್ತೀಚಿನ ಭಾರೀ ಮಳೆಯಿಂದಾಗಿ ತನ್ನ ಸಂಪೂರ್ಣ ಸೌಂದರ್ಯದಲ್ಲಿ ಜೀವಂತವಾಗಿದೆ. ಸುಮಾರು 50 ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಬೀಳುತ್ತಿರುವ ಈ ಅದ್ಭುತ ದೃಶ್ಯವು, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ನಿಜಕ್ಕೂ ರೋಮಾಂಚಕ ಅನುಭವವನ್ನು ನೀಡುತ್ತಿದೆ.
ಜಲಪಾತದ ಸೌಂದರ್ಯವನ್ನು ನೋಡಲು ದೂರ ಊರಿನಿಂದ ಪ್ರವಾಸಿಗರ ದಂಡುಗಳು ಆಗಮಿಸುತ್ತಿವೆ. ಯುವಕರು, ಮಕ್ಕಳು, ಕುಟುಂಬಗಳು ಎಲ್ಲರೂ ಸಹ ಈ ಪ್ರಕೃತಿಯ ಅದ್ಭುತತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಧನುಷ್ಕೋಟಿಗೆ ಧಾರ್ಮಿಕ ಮಹತ್ವವೂ ಕೂಡ ಇದೆ. ರಾಮಾಯಣದ ಕಥಾನಕದಂತೆ, ಸೀತಾಮಾತೆಗಾಗಿ ರಾಮಚಂದ್ರನು ಇಲ್ಲಿ ಧನುಷ್ಕೋಟಿ ನಿರ್ಮಿಸಿದ್ದನೆಂಬ ನಂಬಿಕೆಯಿದೆ. ಈ ಕಾರಣದಿಂದ ಮಹಿಳೆಯರು ಇಲ್ಲಿ ಅರಿಶಿನ, ಕುಂಕುಮ ಮತ್ತು ಹೂಗಳನ್ನು ಅರ್ಪಿಸುತ್ತಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ಇನ್ನು ಜಲಪಾತದ ಸಮೀಪದಲ್ಲೇ ಇರುವ ಕೋದಂಡರಾಮ ದೇವಸ್ಥಾನಕ್ಕೆ ಬರುವ ಭಕ್ತರು ಸಹ ಇಲ್ಲಿ ನದಿ ತೀರದ ತಂಪು ಗಾಳಿ, ಪ್ರಕೃತಿಯ ಸೌಂದರ್ಯ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಒಂದೆಡೆ ಅನುಭವಿಸುತ್ತಿದ್ದಾರೆ. ಇದೊಂದು ಪ್ರಕೃತಿ ಮತ್ತು ಭಕ್ತಿಯ ಸಂಗಮವಾಗಿದೆ. ಮಕ್ಕಳು ನೀರಿನ ಚಿಮ್ಮುವಿಕೆಯಲ್ಲಿ ಆನಂದಿಸುತ್ತಿದ್ದರೆ, ಹಿರಿಯರು ಪ್ರಕೃತಿಯ ಈ ಕಲಾಕೃತಿಯನ್ನು ವೀಕ್ಷಿಸುತ್ತಾ ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳುತ್ತಿದ್ದಾರೆ.