ಚಿಕ್ಕಬಳ್ಳಾಪುರ:
ಇಂಚು ಭೂಮಿ ಸಿಗುತ್ತೆ ಜನರು ಏನು ಬೇಕಾದ್ರು ಮಾಡಲು ಇಳಿಯುತ್ತಾರೆ ಅನ್ನೋದು ಗೊತ್ತೇ ಇದೆ. ದುಡ್ಡು, ಭೂಮಿಗಾಗಿ ಈವರೆಗೂ ಅದೆಷ್ಟೋ ಮಾರಾಮಾರಿ ನಡೆದಿವೆ. ಜಮೀನು ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡೋ ಕಾಲ ಬಂದಿದೆ. ಜಮೀನು ವಿಚಾರವಾಗಿ ಓರ್ವ ವ್ಯಕ್ತಿಯ ಮೇಲೆ ಮಚ್ಚು-ಲಾಂಗುಗಳಿಂದ ಏಕಾಏಕಿ ಅಟ್ಯಾಕ್ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಲ್ಲಿಮರದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಲ್ಲಿಮರದಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ಮೇಲೆ ಸುಮಾರು 8 ಮಂದಿ ಜನರು ಮಚ್ಚು- ಲಾಂಗುಗಳಿಂದ ಸಿಕ್ಕ ಸಿಕ್ಕ ಕಡೆ ಹಲ್ಲೆ ಮಾಡಿದ್ದಾರೆ, ಹಲ್ಲೆಯಿಂದ ಗಾಯಗೊಂಡ ಶ್ರೀನಿವಾಸ್ಗೆ ಗಾಯಗಳಾಗಿದ್ದು ಕೂಡಲೇ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು 8 ಜನರು ಓರ್ವ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿರೋದನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರು ಗ್ರಾಮದ ನಾರಾಯಣಪ್ಪ ಎಂಬುವವರು ಹೊಸದಾಗಿ ಜಮೀನನ್ನು ಖರೀದಿ ಮಾಡಿದ್ದು, ಜಮೀನು ಖರೀದಿಗೆ ಶ್ರೀನಿವಾಸ್ ಸಾಕ್ಷಿಯಾಗಿ ಸಹಿ ಮಾಡಿದ್ರಂತೆ. ಆದ್ರೆ ಶ್ರೀನಿವಾಸ್ ಪಾಲಿಗೆ ಜಮೀನು ಖರೀದಿಗೆ ಸಾಕ್ಷಿ ಹಾಕಿದ್ದೇ ತಪ್ಪಾಯ್ತೋ ಏನೋ. ಶ್ರೀನಿವಾಸ್ ಮೇಲೆ ಜಿದ್ದು ಇಟ್ಟುಕೊಂಡಿದ್ದ ದಿಬ್ಬೂರು ಗ್ರಾಮದ ಕೆಂಪರಾಜು, ಮುನಿರಾಜು ಸೇರಿ 8 ಮಂದಿ ಮಚ್ಚು ಲಾಂಗುಗಳಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಶ್ರೀನಿವಾಸ್ ಹೆಂಡ್ತಿಯ ತಾಳಿಯನ್ನು ಕೂಡ ಕಿತ್ತು ಹಾಕಿ ಕಿರಾತಕರು ಅಟ್ಟಹಾಸ ಮೆರೆದಿದ್ದಾರೆ ಎಂದು ಶ್ರೀನಿವಾಸ್ ಪತ್ನಿ ಆರೋಪ ಮಾಡ್ತಿದ್ದಾರೆ.
ಸದ್ಯ ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀನಿವಾಸ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.