ಪಾವಗಡ : ಸುಮಾರು 40 ವರ್ಷಗಳಿಂದ ನಾವು ಜಮೀನಿನನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಈಗಾ ಏಕಾಏಕಿ ವ್ಯಕ್ತಿಯೊಬ್ಬ ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾನೆ. ಈ ಜಮೀನು ನಮಗೆ ಸೇರಿದ್ದು, ನಮ್ಮ ಕುಟುಂಬಗಳಿಗೆ ಈ ಭೂಮಿ ಬಿಟ್ಟರೇ ಬೇರೆ ಜಾಗ ಇಲ್ಲ ಎಂದು ಪಾವಗಡದಲ್ಲಿ ಗ್ರಾಮಸ್ಥರು ನ್ಯಾಯ ಕೊಡಿಸುವಂತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಕೊಡಮಡುಗು ಗ್ರಾಮದಲ್ಲಿ ಸರ್ವೆ ನಂ. 146 ರಲ್ಲಿ 57 ಎಕರೆ 55 ಗುಂಟೆ ಹಾಗೂ ಸರ್ವೆ ನಂ. 38 ರಲ್ಲಿ 2 ಎಕರೆ 08 ಗುಂಟೆ ಜಮೀನನ್ನು ನಮಗೆ ಮೈಸೂರು ಮಹಾರಾಜರ ಕಾಲದಲ್ಲಿ ನೀಡಲಾಗಿತ್ತು. ಇವು ಬೇಗಾರ್ ಇನಾಮಿ ಜಮೀನುಗಳಾಗಿದ್ದು, ಮೂರು ತಲೆಮಾರುಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಇದೇ ಭೂಮಿಯನ್ನು ನಂಬಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈಗ ಜೊಳ್ಳಪ್ಪ ಗಾರಿ ನಾಗರಾಜು ಅನ್ನೋ ವ್ಯಕ್ತಿ ಜಮೀನು ನಮ್ಮದು ಅಂತ ಹೇಳಿ ಕೃಷಿ ಮಾಡುತ್ತಿದ್ದಾರೆ. ಅದು ನಮ್ಮ ಪೂರ್ವಜರ ಸ್ವತ್ತು. ವಂಶವೃಕ್ಷವನ್ನು ನೋಡಿ ನಮಗೆ ಮತ್ತೆ ಆ ಜಮೀನು ವಾಪಾಸ್ ಕೊಡಿಸಬೇಕೆಂದು ತಹಶೀಲ್ದಾರ್ಗೆ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ದಲಿತ ಮುಖಂಡರೊಬ್ಬರು ಮಾತನಾಡಿ, ಇನಾಮಿ ಜಾಗದಲ್ಲಿ ಈ ದಲಿತ ಕುಟುಂಬಗಳು ತಲಾತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿವೆ. ಈ ಜಾಗವನ್ನು ಅವರಿಗೆ ಮೈಸೂರು ಮಹಾರಾಜರ ಕಾಲದಲ್ಲಿ ನೀಡಲಾಗಿತ್ತು. ಈಗ ನಾಗರಾಜು ಅನ್ನೋ ವ್ಯಕ್ತಿ ಜಮೀನು ನನ್ನದು ಎನ್ನುತ್ತಿದ್ದಾರೆ. ಹೀಗಾಗಿ ಈ ದಲಿತ ಕುಟುಂಬಗಳಿಗೆ ನ್ಯಾಯ ದೊರಕಿಸಿ, ಸೂಕ್ತ ದಾಖಲೆಗಳನ್ನು ನೀಡಬೇಕು ಎಂದರು.
ಇತ್ತ ಜೊಳಪ್ಪ ನಾಗರಾಜುರನ್ನ ಕಚೇರಿಗೆ ಕರೆಸಿ ಸೂಕ್ತ ತನಿಖೆ ನಡೆಸಿ, ತಮಗೆ ನ್ಯಾಯ ಕೊಡಬೇಕೆಂದು ಕೊಡಮಡುಗು ಗ್ರಾಮಸ್ಥರು ಆಗ್ರಹಿಸುತ್ತಿದ್ದು, ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.