ಗುಬ್ಬಿ :
ತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮೊನ್ನೆಯಷ್ಟೇ ತೋಟದ ಮನೆಗೆ ನುಗ್ಗಿ ಚಿರತೆಯೊಂದು ಕರುವನ್ನು ಬಲಿ ಪಡೆದಿತ್ತು, ಆದರೆ ಇದೀಗ ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ ಆಗಿದೆ. ಈ ಘಟನೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಬ್ಯಾಡಗೆರೆ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಯಿಂದಾಗಿ ಬ್ಯಾಡಗೆರೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಬ್ಯಾಡಗೆರೆ ಗ್ರಾಮದ ಲಕ್ಷ್ಮಿ ಎಂಬುವವರ ತೋಟದ ಮನೆಯ ದನದ ಕೊಟ್ಟಿಗೆಗೆ ಏಕಾಏಕಿ ಚಿರತೆಯೊಂದು ನುಗ್ಗಿದ್ದು, ಕೊಟ್ಟಿಗೆಯಲ್ಲಿದ್ದ ಕರುವನ್ನು ಹೊತ್ತೊಯ್ದು ಪಕ್ಕದ ತೋಟವೊಂದರ ಬಳಿ ಬಲಿ ಪಡೆದಿದ್ದು, ಕರುವನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ರೈತ ಮಹಿಳೆ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಕರು ಸಾವನ್ನಪ್ಪಿದ್ದಕ್ಕೆ ರೈತ ಮಹಿಳೆ ಲಕ್ಷ್ಮಿ ಕುಟುಂಬ ಕಣ್ಣೀರಾಕುತ್ತಿದ್ದಾರೆ.
ಇನ್ನು ಈಗಾಗಲೇ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಎರಡು ಕರುಗಳ ಮೇಲೆ ಚಿರತೆ ದಾಳಿಯನ್ನು ನಡೆಸಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಆದಷ್ಟು ಬೇಗ ಚಿರತೆ ಸೆರೆ ಹಿಡಿದು, ಚಿರತೆ ಕಾಟದಿಂದ ಮುಕ್ತಿ ಕೊಡಿಸುವಂತೆ ಸ್ಥಳೀಯರು ಆಗ್ರಹಿಸ್ತಾ ಇದ್ದಾರೆ.