ತುಮಕೂರು :
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಅಂತರಸನಹಳ್ಳಿ ಮಾರುಕಟ್ಟೆಗೆ ಪ್ರತಿನಿತ್ಯ ಸಹಸ್ರಾರು ಜನರು ಬರ್ತಾರೆ. ಸಾವಿರಾರು ಜನ ಹೂ ಹಣ್ಣು, ತರಕಾರಿಯನ್ನು ಖರೀದಿಸಲು ಬಂದರೆ, ನೂರಾರು ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡೋದಕ್ಕೆ ದೂರದ ಊರುಗಳಿಂದ ಬರ್ತಾರೆ. ಇನ್ನು ಹಬ್ಬ ಹರಿದಿನಗಳು ಬಂದರಂತೂ ಇಲ್ಲಿ ಕಾಲಿಡೋದಕ್ಕೂ ಆಗದಷ್ಟು ಜನರು ಇರ್ತಾರೆ. ಇಷ್ಟೆಲ್ಲಾ ಜನ ಸೇರುವ ಈ ಮಾರುಕಟ್ಟೆಯಿಂದ ಎಪಿಎಂಸಿಗೂ ಒಳ್ಳೆಯ ಆದಾಯ ಬರುತ್ತೆ. ಆದರೆ ಈ ಮಾರುಕಟ್ಟೆ ಮಾತ್ರ ಸರಿಯಾದ ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ.
ಈ ಬೃಹತ್ ಮಾರುಕಟ್ಟೆಯಲ್ಲಿ ಪ್ರತಿದಿನ ತರಕಾರಿ, ಹೂ ಹಣ್ಣು ಸೇರಿದಂತೆ ಇನ್ನಿತರ ತ್ಯಾಜ್ಯಗಳು ಹೇರಳವಾಗಿ ಉತ್ಪಾದನೆಯಾಗುತ್ತೆ. ಆದರೆ ಈ ಮಾರುಕಟ್ಟೆಯಲ್ಲಿ ಒಂದೇ ಒಂದು ಕಸದ ತೊಟ್ಟಿಯಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿದ್ದು, ತರಕಾರಿ, ಹೂ ಹಣ್ಣುಗಳು ಕೊಳೆತು ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ, ಸರಿಯಾದ ನಿರ್ವಹಣೆಯೂ ಇಲ್ಲದೇ ಅಂತರಸನಹಳ್ಳಿ ಮಾರುಕಟ್ಟೆ ತಿಪ್ಪೆ ಗುಂಡಿಯಂತಾಗಿ ಬದಲಾಗಿದೆ. ಇದರಿಂದ ಇಲ್ಲಿನ ವ್ಯಾಪಾರಿಗಳು, ತಮ್ಮ ಉತ್ಪನ್ನ ಮಾರಲು ಬರುವ ರೈತರು, ಖರೀದಿಗೆ ಬರುವ ಗ್ರಾಹಕರು ರೋಸಿ ಹೋಗಿದ್ದಾರೆ. ಇನ್ನಾದರೂ ಎಪಿಎಂಸಿ ಆಡಳಿತ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಂಡು, ಮಾರುಕಟ್ಟೆ ರೋಗ ಹರಡುವ ತಾಣ ಆಗುವುದನ್ನು ತಪ್ಪಿಸಬೇಕಿದೆ.