ಚಿಕ್ಕಬಳ್ಳಾಪುರ :
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ ಕಾಟ ಹೆಚ್ಚಾಗ್ತಾನೆ ಇದ್ದು, ಅದೆಷ್ಟೋ ಅಮಾಯಕ ಜೀವಗಳು ಉಸಿರು ನಿಲ್ಲಿಸಿವೆ. ಮೈಕ್ರೋ ಫೈನಾನ್ಸ್ಗಳ ಕಾಟಕ್ಕೆ ಮೂಗುದಾರ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದಿದರೂ ಕೂಡ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮಾತ್ರ ನಿಲ್ತಾ ಇಲ್ಲ. ಅವರ ಕಿರುಕುಳಕ್ಕೆ ಬೇಸತ್ತ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿದ್ರೆ, ಮನೆಗೆ ಆಧಾರವಾದವರನ್ನು ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿದ್ದಾರೆ.
ಸಾವಿನ ಮನೆಯನ್ನೂ ನೋಡದೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿರೋ ಅಮಾನವೀಯ ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ಎಂಬ ಯುವಕ ಕಳೆದ ದಿನವಷ್ಟೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅದು ಕೂಡ ಮೈಕ್ರೋ ಫೈನಾನ್ಸ್ಗಳ ಕಿರುಕುಳದಿಂದಲೇ ಆತ ಸೂಸೈಡ್ ಮಾಡಿಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ಸಾವಿನ ಮನೆಗೂ ಕೂಡ ಫೈನಾನ್ಸ್ ಸಿಬ್ಬಂದಿ ದೌಡಾಯಿಸಿ ಸಾಲ ವಸೂಲಿಗೆ ಮುಂದಾಗಿದ್ದು ಮಾನವೀಯತೆಯನ್ನೇ ಮರೆತಿದ್ದಾರೆ.
ನಿನ್ನೆಯಷ್ಟೇ ಸಾಲಗಾರನ ಕಾಟಕ್ಕೆ ಜಾಲಹಳ್ಳಿ ಗ್ರಾಮದ ಮಂಜುನಾಥ್ ನೇಣಿಗೆ ಶರಣಾಗಿದ್ದ. ಮನೆಗೆ ಆಧಾರವಾಗಿದ್ದವನ್ನು ಕಳೆದುಕೊಂಡು ಇಡೀ ಕುಟುಂಬ ಕಂಗಾಲಾಗಿದ್ದ ವೇಳೆಯೇ ಮರು ದಿನ ಜಾಲಹಳ್ಳಿಯ ಸಾವಿನ ಮನೆಗೆ ತೆರಳಿ ನೊಂದ ಕುಟುಂಬಕ್ಕೆ ಮತ್ತಷ್ಟು ನೋವು ಕೆಲಸ ಮಾಡಿದ್ದಾರೆ. ಸಾಲ ಕಟ್ಟುವಂತೆ ಪೀಡಿಸಿದ್ದಾರೆ. ಇದನ್ನು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಂತೆ ಫೈನಾನ್ಸ್ ಸಿಬ್ಬಂದಿ ಎಸ್ಕೇಪ್ ಆಗಿದ್ದಾರೆ. ಆದರೆ ಈ ಮೈಕ್ರೋ ಫೈನಾನ್ಸ್ ಕಂಪನಿ ಮಾಡಿರೋ ಅಮಾನವೀಯ ಕೃತ್ಯವನ್ನು ಖಂಡಿಸಿದ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಎಲ್ಎನ್ಟಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಐ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಭರವಸೆ ನೀಡಿದ ಬೆನ್ನಲ್ಲೇ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.
ಮೈಕ್ರೋ ಫೈನಾನ್ಸ್ ಕಾಟಕ್ಕೆ ಮೂಗುಧಾರ ಹಾಕಿದ್ರು ಕೂಡ ಬೆಂಬಡದೇ ಕಾಡ್ತಾ ಇದ್ದು, ಇನ್ನು ಅದೆಷ್ಟು ಬಲಿಯಾಗಬೇಕೋ ಆ ದೇವರೇ ಬಲ್ಲ. ಸರ್ಕಾರ ಮುಂದಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ.