MADHUGIRI : ಮಧುಗಿರಿ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವು ಕಳೆದ ಬಾರಿಗಿಂತ ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸಬೇಕು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಗ್ರಾಮದಲ್ಲಿ ಜುಲೈ.5 ರಿಂದ 9 ರ ವರೆಗೆ ನಡೆಯಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆ ಪ್ರಯುಕ್ತ ವ್ಯವಸ್ಥಾಪನ ಸಮಿತಿ ಸಹಕಾರದೊಂದಿಗೆ ತಹಶೀಲ್ದಾರ್ ಸೂಚಿಸಿರುವ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಾತ್ರಾ ಮಹೋತ್ಸವದಲ್ಲಿ ಏನೇ ಅನಾಹುತ ಸಂಭವಿಸಿದರೂ ಆಯಾ ಇಲಾಖೆಯ ಅಧೀಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಬರುವ ಭಕ್ತಾದಿಗಳಿಗೆ ರಸ್ತೆ, ಕುಡಿಯುವ ನೀರು, ಬೆಳಕು, ಸೇರಿದಂತೆ ಯಾವುದೆ ರೀತಿಯ ತೊಂದರೆ ಎದುರಾಗಬಾರದು. ದೇವಸ್ಥಾನದ ಆಸುಪಾಸಿನಲ್ಲಿ ಯಾವುದೇ ರೀತಿಯ ಪ್ರಸಾದ ವಿತರಣೆ ಮಾಡಿದರೂ, ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಕುಡಿಯುವ ನೀರು ಪರಿಶೀಲಿಸಿ ಭಕ್ತಾದಿಗಳಿಗೆ ವಿತರಣೆ ಮಾಡಬೇಕು ಎಂದರು.
ದೇವಸ್ಥಾನಕ್ಕೆ ಬರುವ ದಾರಿಯಲ್ಲಿ 11ಕೆವಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಗಿಡಗಳು ಬೆಳೆದಿದ್ದು, ಕೂಡಲೇ ಜಂಗಲ್ ಕಟಿಂಗ್ ಮಾಡಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿಪಡಿಸಿ ರಸ್ತೆಯ ಎರಡು ಬದಿಯಲ್ಲಿ ಜಂಗಲ್ ಕಟಿಂಗ್ ಮಾಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ, ಬೆಸ್ಕಾಂ, ಅಗ್ನಿಶಾಮಕ, ಗ್ರಾಪಂ ಸೇರಿದಂತೆ ಲೋಕೋಪಯೋಗಿ ಇಲಾಖೆಗೆ ನೀಡುವ ಹೊಣೆಯನ್ನು ತಪ್ಪದೆ ಪಾಲಿಸಬೇಕು ಎಂದು ಸಚಿವ ಕೆ.ಎನ್ ರಾಜಣ್ಣ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್ತಾಜ್, ಡಿವೈಎಸ್ಪಿ ಮಂಜುನಾಥ್, ಪಿಎಸ್ಐ ಶ್ರೀನಿವಾಸ್ ಪ್ರಸಾದ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಲಿತಮ್ಮ ಉಗ್ರೇಗೌಡ, ಉಪಾಧ್ಯಕ್ಷ ಮಂಜುನಾಥ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಶಾಸ್ತ್ರಿ, ಪ್ರಧಾನ ಅರ್ಚಕ ಮಧೂಸೂದನ್, ಗ್ರಾಮ ಪಂಚಾಯ್ತಿ ಸದಸ್ಯ ಶಂಕರ್ ಪ್ರಜ್ವಲ್ ತಾಡಿ ಶಿವರಾಂ ಹಾಜರಿದ್ದರು.