ಮಧುಗಿರಿ: ‘ಗುಣಾತ್ಮಕ ಶಿಕ್ಷಣಕ್ಕಾಗಿ ಅನುಭವಾತ್ಮಕ ಕಲಿಕೆ’ ಎಂಬ ಶೀರ್ಷಿಕೆಯೊಂದಿಗೆ ಮಧುಗಿರಿ ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ವಿಜಯ ಕರ್ನಾಟಕದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಶಿಸ್ತಿನ ಜೊತೆಗೆ ಹಬ್ಬದ ಸಂಭ್ರಮವೂ ನೆರೆದಿತ್ತು.
ಮಕ್ಕಳನ್ನು ಪ್ರೇರೇಪಿಸಲು ಎತ್ತಿನಗಾಡಿಯಲ್ಲಿ ಮೆರವಣಿಗೆಯ ಮೂಲಕ ಗ್ರಾಮದ ಬೀದಿಗಳಲ್ಲಿ ಸಂಚರಿಸಿ, ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಪೋಷಕರಲ್ಲೂ ಶಾಲೆಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿದೆ. ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳು, ಪೋಷಕರು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡ್ರು.
ಇನ್ನು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಡಿಡಿಪಿ ಗಿರಿಜಾತ ಚಾಲನೆ ನೀಡಿದ್ರು, ನಂತರ ಮಾತನಾಡಿದ ಅವರು, ನೀಲಿ ಬಣ್ಣದಿಂದ ಶಾಲೆ ಕಂಗೊಳಿಸುತಿದ್ದು, ದೇವಸ್ಥಾನದ ಕಳೆಯೊಂದಿಗೆ ಜಾತ್ರೆಯ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಊರು ನಮ್ಮ ಶಾಲೆ ಎಂಬ ಅಭಿಮಾನ ಶ್ಲಾಘನೀಯ. ಸಂತೋಷ ಕೂಟದಂತೆ ಶಾಲಾ ಪ್ರಾರಂಭೋತ್ಸವ ನಡೆದಿದೆ. ಮುದ್ದಿನ ಮಕ್ಕಳು ಕ್ರೀಯಾಶೀಲರಾಗಿದ್ದಾರೆ. ಇಂತಹ ಸಂಭ್ರಮಕ್ಕೆ ಕಾರಣವಾದ ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು, ಶಾಲಾ ಪ್ರಾರಂಭೋತ್ಸವ ದಿನ ನಿತ್ಯದ ಕಲಿಕೆಯ ಹಬ್ಬವಾಗಬೇಕು ಎಂದರು
ಬಿಇಓ ಹನುಮಂತರಾಯಪ್ಪ ಮಾತನಾಡಿ, ಈ ದಿನ ಅತ್ಯಂತ ಸಂತೋಷದ ವಿಚಾರ. ಗ್ರಾಮದಲ್ಲಿ ಹಬ್ಬದ ವಾತಾವರಣಾ ನಿರ್ಮಾಣವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಳಸದೊಂದಿಗೆ ತಂದು ಬಿಟ್ಟಿದ್ದೀರಿ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಆಶಯ ನಮ್ಮದು, ನಿಮ್ಮ ಈ ಸಹಕಾರ ನಿರಂತರವಾಗಿರಲಿ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಅಶ್ವತ್ಥ ನಾರಾಯಣ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ದೇಣಿಗೆಯನ್ನಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಪಾರ್ವತಮ್ಮ ವೆಂಕಟೇಶ್, ಎಸ್ಡಿಎಂಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಶಿಲ್ಪಿ, ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಎಂ.ಎಸ್, ಬಿಆರ್ಪಿ ಯೋಶದಮ್ಮ, ಮಾಜಿ ಗ್ರಾಪಂ ಸದಸ್ಯ ವೀರಣ್ಣ, ಶಿಕ್ಷಕಿ ಗೌರಮ್ಮ ಹಾಜರಿದ್ದರು.