KORATAGERE : ಮಿನಿ ಬಳ್ಳಾರಿಯಾಗ್ತಿದ್ಯಾ ಕೊರಟಗೆರೆ? | ಕಾವರಗಲ್‌ ಅರಣ್ಯದಲ್ಲೂ ಬ್ಲಾಸ್ಟಿಂಗ್‌ ಸದ್ದು

KORATAGERE NEWS : ಕೊರಟಗೆರೆ ತಾಲೂಕನ್ನ ಕೆಲವು ಗಣಿ ಮಾಲೀಕರು ಮಿನಿ ಬಳ್ಳಾರಿ ಮಾಡಲು ಹೊರಟಿದ್ದಾರಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ. ಗೃಹ ಸಚಿವರ ತವರು ಕ್ಷೇತ್ರವಾಗಿರೋ ಕೊರಟಗೆರೆ ತಾಲೂಕಿನಲ್ಲಿ ನಿಧಾನವಾಗಿ ಗಣಿ ಮಾಫಿಯಾ ಸದ್ದು ಮಾಡತೊಡಗಿದೆ. ಕೊರಟಗೆರೆ ತಾಲೂಕಿನ ಬೆಟ್ಟ, ಗುಡ್ಡಗಳ ಮೇಲೆ ಕಣ್ಣು ಹಾಕುತ್ತಿರುವ ಗಣಿ ಕುಳಗಳು, ಆ ಬೆಟ್ಟ, ಗುಡ್ಡಗಳನ್ನ ಬಗೆದು ನೆಲಸಮ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಇದೀಗ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದ ಬಳಿಯಿರುವ ಕಾವರಗಲ್‌ ಮೀಸಲು ಅರಣ್ಯ ಪ್ರದೇಶಕ್ಕೂ ಗಣಿ ಮಾಫಿಯಾ ಲಗ್ಗೆಯಿಟ್ಟಿದ್ದು, ಕಲ್ಲುಕ್ವಾರೆಯ ಬ್ಲಾಸ್ಟಿಂಗ್‌ ಸದ್ದಿನ ಆರ್ಭಟಕ್ಕೆ ಹತ್ತಾರು ಗ್ರಾಮಗಳ ಜನರು ನಲುಗಿ ಹೋಗ್ತಿದ್ರೆ, ಮತ್ಯೊಂದು ಕಡೆ ಈ ಬ್ಲಾಸ್ಟಿಂಗ್‌ ಆರ್ಭಟಕ್ಕೆ ಹೆದರಿ ಕಾಡುಪ್ರಾಣಿಗಳು ದಿಕ್ಕಾಪಾಲಾಗಿ ನಾಡಿನತ್ತ ಬರ್ತಾ ಇವೆ.

ಕೊರಟಗೆರೆಯನ್ನ ಬರಪೀಡಿತ ತಾಲೂಕು ಅಂತಾ ಕರೆದರೂ ಇಲ್ಲಿ ವೈವಿಧ್ಯಮಯ ವನ್ಯಸಂಪತ್ತು ಕೂಡ ಇದೆ. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ ಕೂಡ ಕೊರಟಗೆರೆ ತಾಲೂಕಿಗೆ ಹೊಂದಿಕೊಂಡೇ ಇದೆ. ಈ ಕಾವರಗಲ್‌ ಮೀಸಲು ಅರಣ್ಯ ಪ್ರದೇಶದಲ್ಲೂ ಸಾಕಷ್ಟು ವನ್ಯ ಸಂಕುಲಗಳಿವೆ. ಕರಡಿ, ನವಿಲು, ಕಾಡುಕಿರುಬ, ಜಿಂಕೆ, ಮೊಲ ಸೇರಿದಂತೆ ನೂರಾರು ಬಗೆಯ ವನ್ಯಜೀವಿಗಳಿವೆ. ಈ ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬ ಕಾನೂನು ಕೂಡ ಇದೆ. ಇಷ್ಟೆಲ್ಲಾ ಇದ್ದರೂ ಕಾವರಗಲ್‌ ಮೀಸಲು ಅರಣ್ಯ ಪ್ರದೇಶದ ಗಡಿಯಲ್ಲಿಯೇ ಗಣಿಗಾರಿಕೆಗೆ ಅವಕಾಶ ನೀಡಲಾಗಿದ್ದು, ಬ್ಲಾಸ್ಟಿಂಗ್‌ ಕೂಡ ಮಾಡಲಾಗ್ತಿದೆ. ಇದರಿಂದ ವನ್ಯಸಂಕುಲಕ್ಕೆ ಸಾಕಷ್ಟು ತೊಂದರೆಯಾಗ್ತಿದೆ.

ಜೆಟ್ಟಿಅಗ್ರಹಾರ ಗ್ರಾಮದ ಸರ್ವೆ ನಂ.35ರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಈ ಕ್ವಾರೆ ಗುಬ್ಬಿಯ ಬಿಜೆಪಿ ಮುಖಂಡ ಚಂದ್ರಶೇಖರ್‌ ಯಾನಿ ಗ್ಯಾಸ್‌ ಬಾಬು ಎಂಬ ವ್ಯಕ್ತಿಗೆ ಸೇರಿದ್ದು, ಗಣಿ ಇಲಾಖೆಯಿಂದ ಸರ್ವೆ ನಂ.35ರಲ್ಲಿ 4ಎಕರೆ 38 ಗುಂಟೆ ಜಮೀನು ಕ್ವಾರೆಗಾಗಿ ಮಂಜೂರಾಗಿದೆ. ಈ ಗ್ಯಾಸ್‌ ಬಾಬು ತನ್ನ ರಾಜಕೀಯ ಪ್ರಬಾವವನ್ನ ಬಳಸಿ ಗಣಿ ನಿಯಮಗಳನ್ನೇ ಉಲ್ಲಂಘಿಸಿ ಕ್ವಾರೆ ಗಣಿಗಾರಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಭೂಮಿಯಿಂದ ಬರೋಬ್ಬರಿ 2ಸಾವಿರ ಅಡಿ ಎತ್ತರದ ಕಾವರಗಲ್ ಬೆಟ್ಟದ ಮೇಲೆ ಈ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ನಿಯಮಬಾಹಿರವಾಗಿ ಬ್ಲಾಸ್ಟಿಂಗ್‌ ನಡೆಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ, ಪ್ರಾಣಿಸಂಕುಲಕ್ಕೆ ಹಾನಿ ಮಾಡ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಇನ್ನು ಜೆಟ್ಟಿಅಗ್ರಹಾರ ಸರ್ವೆ ನಂ.35ರಲ್ಲಿ ಗಣಿ ಇಲಾಖೆ ನೀಡಿರುವ ಸ್ಥಳವನ್ನ ಬಿಟ್ಟು ಕಾವರಗಲ್ ಅರಣ್ಯದಲ್ಲಿ ಅಕ್ರಮವಾಗಿ  ರಸ್ತೆ ನಿರ್ಮಿಸಿಕೊಂಡು  ಗಣಿಗಾರಿಕೆ ನಡೆಸುತ್ತಿದ್ದಾರಂತೆ. ಈ ಬಗ್ಗೆ ಗ್ರಾಮಸ್ಥರು ಮತ್ತು ಹೋರಾಟಗಾರರು ಗೃಹ ಸಚಿವರಿಗೆ ಪತ್ರ ಬರೆದು ಮನವರಿಕೆ ಮಾಡುವ ಕೆಲಸವನ್ನ ಕೂಡ ಮಾಡಿದ್ರು. ಆಗ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರ ಕಾರ್ಯಾಲಯದಿಂದ ತುಮಕೂರು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿತ್ತು. ಇದೀಗ ಕಾವರಗಲ್ ಅರಣ್ಯದಲ್ಲಿನ ವನ್ಯಜೀವಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೊರಟಗೆರೆ ವಲಯ ಅರಣ್ಯಾಧಿಕಾರಿ  ಗಣಿ  ಇಲಾಖೆಗೆ ಪತ್ರ ಬರೆದಿದ್ದು, ಅರಣ್ಯ ಇಲಾಖೆ ದೂರಿನ ಅನ್ವಯ ಈ ಕ್ವಾರೆಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡುವಂತೆ ಗಣಿ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇನ್ನು ಕಾವರಗಲ್ ಅರಣ್ಯದಲ್ಲಿ ಮತ್ತೆ ಗಣಿಗಾರಿಕೆ ನಡೆಸದಂತೆ 25ಕ್ಕೂ ಅಧಿಕ ಗ್ರಾಮಸ್ಥರಿಂದ ಗೃಹಸಚಿವರಿಗೆ ಮನವಿಯನ್ನೂ  ಸಲ್ಲಿಸಲಾಗಿದೆ. ಕೇವಲ ತಾತ್ಕಾಲಿಕವಾಗಿ ಗಣಿಗಾರಿಕೆ ಸ್ಥಗಿತಗೊಳಿಸಿದ್ರೆ ಸಾಲದು, ಶಾಸ್ವತವಾಗಿ ಗಣಿಗಾರಿಕೆಯನ್ನ ನಿಲ್ಲಿಸಿ ಗ್ರಾಮಸ್ಥರಿಗೆ, ಕಾಡುಪ್ರಾಣಿಗಳಿಗೆ ಆಗುತ್ತಿರುವ ಸಮಸ್ಯೆಯನ್ನ ತಪ್ಪಿಸಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

Author:

...
Keerthana J

Copy Editor

prajashakthi tv

share
No Reviews