BANGALORE : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದಲ್ಲಿ ತುರ್ತು ಅಧಿವೇಶನವನ್ನು ಕರೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಮ್ಮ ಗಂಭೀರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ ಅವರು ಪತ್ರದಲ್ಲಿ ಈ ಘಟನೆ ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಮತ್ತು ಪರಿಸ್ಥಿತಿ ನಿರ್ವಹಣೆಯ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. “ಈ ದುರ್ಘಟನೆ ಜನರಲ್ಲಿ ಆತಂಕ ಹಾಗೂ ಭೀತಿಯನ್ನೂ ಉಂಟುಮಾಡಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸೃಷ್ಟಿಯಾದ ಈ ಪರಿಸ್ಥಿತಿ ವಿಧಾನಮಂಡಲದಲ್ಲಿ ಚರ್ಚೆಗೆ ಬರಬೇಕು,” ಎಂದು ಅವರು ಹೇಳಿದ್ದಾರೆ.
ಈ ಘಟನೆ ಕೇವಲ ಕ್ರಿಕೆಟ್ ಆಟ ಅಥವಾ ಕ್ರೀಡಾ ಆಯೋಜನೆಯ ವೈಫಲ್ಯವಲ್ಲ, ಇದು ಇಂತಹ ಭಾರೀ ಕಾರ್ಯಕ್ರಮಗಳಿಗೆ ಸರ್ಕಾರ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದರ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಅವರು ಪತ್ರದಲ್ಲಿ ಈ ದುರಂತವನ್ನು "ತಡೆಗಟ್ಟ ಬಹುದಾದ, ಆದರೆ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಘಟನೆ" ಎಂದು ಬರೆದಿದ್ದಾರೆ.
ಆರ್. ಅಶೋಕ್ ಅವರು ಸಿಎಂಗೆ ಪತ್ರದ ಮೂಲಕ ತುರ್ತು ಅಧಿವೇಶನವನ್ನು ಕರೆಯುವಂತೆ ಆಗ್ರಹಿಸಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.