ದೇಶ : ಭಾರತದ ಜೊತೆಗೆ ನಾನು ಶಾಂತಿ ಮಾತುಕತೆಗೆ ಸಿದ್ಧ - ಪಾಕ್‌ ಪ್ರಧಾನಿ

ದೇಶ :  ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕ್‌ ಉಗ್ರರ ಹತ್ಯೆ ಮಾಡಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಭಾರತ ಮಿಸೈಲ್‌ ಹಾಗೂ ಡ್ರೋನ್‌ ದಾಳಿಗೆ ಪಾಕ್‌ ತತ್ತರಿಸಿ ಹೋಗಿತ್ತು. ಪಾಕ್‌ ನ ಸಂಸದರೂ ಕೂಡ ಯುದ್ಧ ಬೇಡ ಎಂದು ಸಂಸತ್‌ನಲ್ಲಿ ಕಣ್ಣೀರಿಟ್ಟಿದ್ದರು. ಅದರಂತೆ ಅಮೆರಿಕಾದ ನೇತೃತ್ವದಲ್ಲಿ ಸಂಧಾನ ಕೂಡ ಹಾಗಿ ಕದನ ವಿರಾಮ ಘೋಷಿಸಲಾಯ್ತು. ಇದೀಗ ಪಾಕ್‌ ಪ್ರಧಾನಿ ಶೆಹಬಾಜ ಷರೀಫ್‌ ಭಾರತದೊಂದಿಗೆ ಎಲ್ಲಾ ವಿಚಾರದಲ್ಲೂ ನಾವು ಶಾಂತಿ ಮಾತುಕತೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಪ್ರಧಾನಿ ಶೆಹಬಾಜ್ ಜೊತೆ ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ವಾಯುಪಡೆ ಮುಖ್ಯಸ್ಥ ಜಹೀರ್ ಅಹ್ಮದ್ ಬಾಬರ್ ಸಿಧು ವಾಯುನೆಲೆಗೆ ಭೇಟಿ ನೀಡಿದ್ದರು. ಈ ವೇಳೆ ಭಾರತ ಜೊತೆಗೆ ತಾವು ಶಾಂತಿ ಮಾತುಕತೆ ನಡೆಸುತ್ತೇವೆ ಸೈನಿಕರ ಮುಂದೆ ತಿಳಿಸಿದ್ದರು.

ನಾಲ್ಕು ದಿನಗಳ ಕಾಲ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಬಳಿಕ ಪರಸ್ಪರ ಸಂಘರ್ಷ ಕೊನೆಗೊಳಿಸಲು ಮೇ 10ರಂದು ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿದ್ದವು. ಅದಾದ ನಂತರ ಎರಡನೇ ಬಾರಿಗೆ ವಾಯುನೆಲೆಯೊಂದಕ್ಕೆ ಪಾಕ್​ ಪ್ರಧಾನಿ ಭೇಟಿ ಕೊಟ್ಟಿದ್ದಾರೆ. ಬುಧವಾರ, ಸಿಯಾಲ್‌ಕೋಟ್‌ನ ಪಸ್ರೂರ್ ಕಂಟೋನ್ಮೆಂಟ್‌ಗೆ ಪ್ರಧಾನಿ ಶೆಹಬಾಜ್ ಭೇಟಿ ನೀಡಿ, ಸೈನಿಕರೊಂದಿಗೆ ಮಾತುಕತೆ ನಡೆಸಿದ್ದರು.

ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಹತ್ಯೆ ಬಳಿಕ ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಮುಂಜಾನೆ ಆಪರೇಷನ್ ಸಿಂಧೂರ ನಡೆಸಿದ್ದವು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅನೇಕ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿತ್ತು. ಭಾರತದ ರಾಜತಾಂತ್ರಿಕ ಹೊಡೆತಕ್ಕೆ ತತ್ತರಿಸಿರುವ ಪಾಕಿಸ್ತಾನ ಎಲ್ಲಾ ವಿಚಾರಗಳಿಗೆ ಇತಿಶ್ರೀ ಹಾಡುವ ಕಾರಣಕ್ಕೆ ಪ್ರಧಾನಿ ಶೆಹಬಾಜ್ ಶಾಂತಿ ಮಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.

 

Author:

...
Keerthana J

Copy Editor

prajashakthi tv

share
No Reviews