HEBBURU : ಜಮೀನು ವಿವಾದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಮೇನಹಳ್ಳಿ ಗ್ರಾಮದ ಸರ್ವೇ ನಂಬರ್ 3 ರಲ್ಲಿರೋ ಸುಮಾರು ಒಂದು ಎಕರೆ 18 ಗುಂಟೆ ಜಾಗದಲ್ಲಿ ಶಿವಕುಮಾರ್ಗೆ 15 ಕುಂಟೆ ಜಮೀನು ನೀಡಿದ್ದು, ಸುಮಾರು ವರ್ಷದಿಂದ ಆ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರ್ತಾ ಇದ್ರು. ಆದ್ರೆ ಈ ಜಮೀನಿನ ಮೇಲೆ ತನ್ನ ದೊಡ್ಡಪ್ಪನವರ ಕುಟುಂಬ ಕಣ್ಣು ಬಿದ್ದಿದೆ.
ಆತ್ಮಹತ್ಯೆಗೆ ಯತ್ನಿಸಿರೋ ಶಿವಕುಮಾರ್ ಅವರ ದೊಡ್ಡಮ್ಮ ಹೊನ್ನಮ್ಮ ಹಾಗೂ ಅವರ ಸೊಸೆ ಪೂರ್ಣಿಮಾ ಅವರು ಮೋಸ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರಂತೆ. ಈಗ ಏಕಾಏಕಿ ಶಿವಕುಮಾರ್ ಬೇಸಾಯ ಮಾಡ್ತಿದ್ದ ಜಾಗಕ್ಕೆ ಬೇರೆ ಊರಿನಿಂದ ಟ್ರ್ಯಾಕ್ಟರ್ ಸಮೇತ ಬಂದು ಉಳುಮೆ ಮಾಡಲು ಮುಂದಾಗಿದ್ದರು. ಇದರಿಂದ ಮನನೊಂದ ರೈತ ಶಿವಕುಮಾರ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹೆಬ್ಬೂರು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ಹೊನ್ನಮ್ಮ ಹಾಗೂ ಅವರ ಸೊಸೆ ಪೂರ್ಣಿಮಾ ಬೇರೆ ಊರಿನಿಂದ ಟ್ರ್ಯಾಕ್ಟರ್ ಕರೆಸಿ ಉಳುಮೆ ಮಾಡಲು ಯತ್ನಿಸಿದ್ದು, ಊರಿನ ಗ್ರಾಮಸ್ಥರೆಲ್ಲರೂ ಇದನ್ನು ತಡೆದು ಆಕ್ರೋಶ ಹೊರಹಾಕಿದರು. ಈ ವೇಳೆ ಗ್ರಾಮಸ್ಥರು ಹಾಗೂ ಹೊನ್ನಮ್ಮ ಹಾಗೂ ಆಕೆಯ ಸೊಸೆ ಪೂರ್ಣಿಮಾ ನಡುವೆ ಮಾತಿನ ಸಮರವೇ ನಡೆಯಿತು. ಈ ವೇಳೆ ಹೆಬ್ಬೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇನ್ನು ರೈತ ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸುವ ಮುನ್ನ ತನ್ನ ಸಾವಿಗೆ ತನ್ನ ದೊಡ್ಡಮ್ಮ ಹೊನ್ನಮ್ಮ ಹಾಗೂ ಆಕೆಯ ಸೊಸೆ ಪೂರ್ಣಿಮಾನೆ ಕಾರಣ ಎಂದು ಡೆತ್ನೋಟ್ ಬರೆದಿದ್ದಾರೆ. ಸದ್ಯ ಈ ಸಂಬಂಧ ಹೆಬ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.