ತುಮಕೂರು :
ತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮತ್ತೊಂದು ಕಡೆ ತುಮಕೂರು ನಗರ ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಾಗಿ ನಗರಕ್ಕೆ ಕೋಟಿ ಕೋಟಿ ಅನುದಾನ ಹರಿದುಬರ್ತಿದೆ. ಆದ್ರೆ ತುಮಕೂರು ನಗರ ವಾಸಿಗಳಿಗೆ ಕಸದ ಸಮಸ್ಯೆಯಿಂದ ಮಾತ್ರ ಮುಕ್ತಿ ಸಿಗುತ್ತಿಲ್ಲ. ನಗರದ ಹೃದಯಭಾಗದಲ್ಲಿಯೇ ಕಸದ ರಾಶಿ ಬೀಳುತ್ತಿವೆ. ತುಮಕೂರಿನ ನಗರ ಪೊಲೀಸ್ ಠಾಣೆಯ ಎದುರು ಇರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪಕ್ಕದ ರಸ್ತೆಯಲ್ಲಿ ಕಸದ ರಾಶಿ ತುಂಬಿ ತುಳುಕಾಡುತ್ತಿದೆ.
ರಸ್ತೆಯ ಎರಡು ಬದಿಗಳಲ್ಲಿಯೂ ಕೊಳೆತ ಕಸದ ರಾಶಿಗಳು, ಬಿಯರ್ ಬಾಟಲ್ಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಇತರ ತ್ಯಾಜ್ಯಗಳನ್ನ ಸುರಿಯಲಾಗಿದೆ. ಹೀಗಾಗಿ ಈ ರಸ್ತೆ ಓಡಾಡುವ ಜನರು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. ಇನ್ನು ರಾತ್ರಿಯಾದ್ರೆ ಈ ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆಯಂತೆ.
ಇನ್ನು ಈ ರಸ್ತೆಯ ಪಕ್ಕದಲ್ಲಿರುವ ಗೋಡೆಗಳ ಮೇಲೆ ಕಸ ಹಾಕಬೇಡಿ ಅಂತಾ ಬರೆದಿದ್ದರೂ ಕಿಡಿಗೇಡಿಗಳು ಮಾತ್ರ ಇದ್ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ಳದೇ ಇಲ್ಲಿಯೇ ಕಸವನ್ನ ತಂದು ಸುರಿಯುತ್ತಿದ್ದಾರಂತೆ. ಪಾಲಿಕೆ ಸಿಬ್ಬಂದಿ ಕೂಡ ಇಲ್ಲಿ ದಿನನಿತ್ಯ ಬಂದು ಸ್ವಚ್ಛಗೊಳಿಸುವ ಕೆಲಸ ಮಾಡ್ತಿಲ್ಲ. ವಾರಕ್ಕೊಮ್ಮೆ ಬಂದು ಕಸವನ್ನ ತುಂಬಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ರಾಶಿ ರಾಶಿ ಕೊಳೆತ ಕಸ ಬಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನು ಕೆಲ ತಿಂಗಳ ಹಿಂದೆ ಈ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿದ್ರೂ ಕೂಡ ಇಲ್ಲಿ ಕಸವನ್ನ ತಂದು ಎಸೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲವಂತೆ.