ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ,ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿ ಅಗ್ರಹಾರ ಸಮೀಪ ಮತ್ತೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರೋದು ಕೊರಟಗೆರೆಯ ಅನ್ನದಾತರನ್ನು ಕೆರಳುವಂತೆ ಮಾಡಿತ್ತು. ಈ ಸಂಬಂಧ ರೈತರ ಆಕ್ರೋಶ ಕಟ್ಟೆಯೊಡೆದಿದ್ದು, ನೆನ್ನೆ ಕೊರಟಗೆರೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧಕ್ಕೆ ಟ್ರ್ಯಾಕ್ಟರ್ಗಳ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದು ಮಾಡೋವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಅನ್ನದಾತರು ಪಟ್ಟುಹಿಡಿದಿದ್ರು. ಕೊರಟಗೆರೆ ಮಿನಿ ವಿಧಾನಸೌಧದ ಆವರಣದಲ್ಲಿಯೇ ಅಡುಗೆ ಮಾಡಿ, ಅಲ್ಲೇ ಊಟವನ್ನೂ ಮಾಡಿ ಪ್ರತಿಭಟನೆ ಮುಂದುವರೆಸಿದರು.
ಕೊರಟಗೆರೆ ತಹಶೀಲ್ದಾರ್, ಮಧುಗಿರಿ ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಮೇಲೆ ಅನ್ನದಾತರು ಪ್ರತಿಭಟನೆಯಿಂದ ಹಿಂದೆಸರಿದಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅನ್ನದಾತರೊಂದಿಗೆ ಮಾತನಾಡಿದ್ರು. ಅಹೋರಾತ್ರಿ ಧರಣಿಯನ್ನ ಕೈಬಿಡುವಂತೆ ಪ್ರತಿಭಟನಾ ನಿರತ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ್ರು. ಬಳಿಕ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಇರೋ ಕಾರಣ ತಹಶೀಲ್ದಾರ್ ನೇತೃತ್ವದಲ್ಲಿ ಡ್ರೋನ್ ಸರ್ವೆ ಕಾರ್ಯ ಆಗಿದೆ ಅಷ್ಟೇ. ಇದ್ರಲ್ಲಿ ರೈತರು ಆತಂಕ ಪಡೋ ಅಗತ್ಯವಿಲ್ಲ.
ಕೊರಟಗೆರೆಯಲಿ ಮೂರು ಕಡೆ ಗಣಿಗಾರಿಕೆ ಪ್ರಾರಂಭಿಸೋ ಬಗ್ಗೆ ರೈತರ ವಿರೋದದ ಬಗ್ಗೆ ಟಾಸ್ಕ್ ಪೋರ್ಸ್ ಕಮಿಟಿ ಗಮನಕ್ಕೆ ಬಂದಿದೆ. ಈಗಾಗಲೇ ಇದ್ರ ಬಗ್ಗೆ ಕಮಿಟಿಯಲ್ಲಿ ಚರ್ಚಿಸಲಾಗಿದ್ದು, ಗಣಿಗಾರಿಕೆ ಕ್ವಾರೆ ಗುತ್ತಿಗೆ ಪಡೆದಿರೋ ಗುತ್ತಿಗೆದಾರರಿಗೆ ನೊಟೀಸ್ ಜಾರಿ ಮಾಡಲಾಗುವುದು ಎಂದರು.
ಒಟ್ಟಿನಲ್ಲಿ ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆಯುತ್ತಿದ್ದ ಅನ್ನದಾತರ ಧರಣಿ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿತ್ತು. ಕೊನೆಗೂ ಅನ್ನದಾತರು ಪ್ರತಿಭಟನೆಯನ್ನ ಕೈಬಿಟ್ಟಿದ್ದು ಅಧಿಕಾರಿಗಳು ನಿರಾಳರಾಗಿದ್ದಾರೆ.