TUMAKURU : ಮಾವಿನಕಾಯಿ ದರ ದಿಢೀರ್ ಕುಸಿತಗೊಂಡಿದ್ದರಿಂದ ಆತಂಕಗೊಳಗಾದ ರೈತರು ಮಾವಿನ ಕಾಯಿಯನ್ನು ರಸ್ತೆಗೆ ಚೆಲ್ಲಿ ಆಕ್ರೋಶ ಹೊರಹಾಕಿರೋ ಘಟನೆ ತುಮಕೂರು ತಾಲೂಕಿನ ಗೂಳೂರು ಮಾವಿನ ಮಂಡಿಯಲ್ಲಿ ನಡೆದಿದೆ. ಬೇಸಿಗೆಯಲ್ಲಿ ಮಾವಿನ ಹಣ್ಣಿನ ಫಸಲು ಬರಬೇಕಿದ್ದು, ಈ ಬಾರಿ ತಡವಾಗಿ ಮಾವಿನ ಹಣ್ಣಿನ ಫಸಲು ಕೈಸೇರಿದ್ದು, ರೈತರು ಮಾವಿನ ಹಣ್ಣನ್ನು ಕಟಾವು ಮಾಡಿ ಮಂಡಿಗೆ ಹಾಕ್ತಿದ್ದಾರೆ. ಮೂರು ರಾಜ್ಯಗಳ ಮಾವಿನಹಣ್ಣು ಒಂದೇ ಬಾರಿಗೆ ಫಸಲಿಗೆ ಬಂದ ಕಾರಣ, ಕರ್ನಾಟಕದ ಮಾವಿನ ಹಣ್ಣಿನ ಬೆಲೆಕುಸಿತ ಗೊಂಡಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಗುಳೂರು ಸುತ್ತಮುತ್ತಲಿನ ರೈತರು ಫಸಲಿಗೆ ಬಂದಿರೋ ಮಾವಿನ ಕಾಯಿಯನ್ನು ಗುಳೂರು ಮಂಡಿಗೆ ಹಾಕಲು ಮುಂದಾಗಿದ್ದರು. ರೈತರು ತೋಟದಿಂದ ಮಾವಿನ ಕಾಯಿಯನ್ನು ಕಿತ್ತು ಮಂಡಿಗೆ ತಂದು ಹಾಕುವಷ್ಟರಲ್ಲಿ ಸುಮಾರು 12 ರೂಪಾಯಿ ಖರ್ಚು ಬರುತ್ತೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಮಾವಿನ ಹಣ್ಣಿಗೆ ಕೇವಲ 6 ರೂಪಾಯಿಗೆ ನಿಗದಿಯಾಗಿದ್ದು, ಇದರಿಂದ ರೈತರು ಆತಂಕ ಗೊಂಡಿದ್ದಾರೆ. ಸಾಲ ಸೋಲ ಮಾಡಿ ಮಾವಿನಕಾಯಿ ಬೆಳೆದಿದ್ದು, ಮಾವಿನಕಾಯಿ ಬೆಲೆ ಕುಸಿತದಿಂದ ರೈತರು ಮಾವಿನ ಕಾಯಿಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ವೇಳೆ ಮಂಡಿ ಮಾಲೀಕರು ಮಾತನಾಡಿ, ಸುಮಾರು ನೂರು ವರ್ಷಗಳ ಹಿಂದೆ ನಾವು ಮಾವಿನ ಮಂಡಿಯನ್ನು ನಡೆಸುತ್ತಿದ್ದು, ಯಾವ ವರ್ಷವೂ ಈ ದುಸ್ಥಿತಿ ಬಂದಿರಲಿಲ್ಲ. ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ವ್ಯಾಪಾರಸ್ಥರಿಗೂ ಹಾಗೂ ರೈತರಿಗೂ ಅನುಕೂಲ ಮಾಡಿ ಕೊಡಬೇಕು ಎಂದರು.
ಒಂದು ವೇಳೆ ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವುದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ರಾಜ್ಯದಲ್ಲಿ ತಂಪು ಪಾನೀಯ ತಯಾರಿಸುವ ಫ್ಯಾಕ್ಟರಿಗಳು ಇಲ್ಲ. ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಇರೋ ತಂಪು ಪಾನೀಯಗಳ ಫ್ಯಾಕ್ಟರಿಗೆ ನಮ್ಮ ರಾಜ್ಯದ ಮಾವಿನಕಾಯಿಯನ್ನು ಸರಬರಾಜು ಮಾಡಲಾಗ್ತಿದೆ. ಹೀಗಿದ್ದರೂ ಕೂಡ ಮಾವಿನಕಾಯಿ ಬೆಲೆ ಕುಸಿತಗೊಂಡಿದೆ ಎಂದರು.
ಒಟ್ಟಿನಲ್ಲಿ ಮಾವಿನಕಾಯಿ ಫಸಲಿಗೆ ಬಂದಿದ್ದು ಮಾರಾಟ ಮಾಡಿ, ಜೀವನ ಸಾಗಿಸೋಣ ಅಂತಿದ್ದ ರೈತರಿಗೆ ಬೆಲೆ ಕುಸಿತ ಶಾಕ್ ನೀಡಿದೆ. ಸಾಲ ಸೋಲ ಮಾಡಿ ಮಾವಿನ ಬೆಳೆ ಬೆಳೆದಿದ್ದ ರೈತರು ಇದೀಗ ಆತಂಕದಲ್ಲಿದ್ದಾರೆ