UTTARA KANNADA : ಅಂಕೋಲದಲ್ಲಿ ಚಿರತೆ ದಾಳಿ | ಯುವಕ ಪ್ರಾಣಾಪಾಯದಿಂದ ಪಾರು

UTTARA KANNADA : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮಪಂಚಾಯತಿ ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿರುವ ಘಟನೆ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಈ ದಾಳಿಯಲ್ಲಿ ಸಂತೋಷ್ ಹೂವಣ್ಣ ಗೌಡ (24) ಎಂಬ ಯುವಕ ಗಾಯಗೊಂಡಿದ್ದು, ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯ ಪಕ್ಕದಲ್ಲಿರುವ ನಿರ್ಮಾಣ ಹಂತದ ಹೊಸ ಮನೆಗೆ ಚಿರತೆ ಪ್ರವೇಶಿಸಿ ಅಲ್ಲಿ ಅಡಗಿಕೊಂಡಿತ್ತು. ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿಯೊಬ್ಬರು ಅಚಾನಕ್ ಚಿರತೆಯ ಕಣ್ಣು ಬಿದ್ದಿದ್ದು, ಆತಂಕಗೊಂಡು ಕಿರುಚುತ್ತಾ ಓಡಿದ್ದಾರೆ. ಕಿರುಚಾಟದಿಂದ ಹೊರ ಬಂದ ಚಿರತೆ, ಅದೇ ಸಮಯದಲ್ಲಿ ಮನೆಯಿಂದ ಹೊರಬರುತ್ತಿದ್ದ ಸಂತೋಷ್ ಗೌಡ ಅವರ ಮೇಲೆ ದಾಳಿ ಮಾಡಿದೆ.

ಇನ್ನು ಚಿರತೆ ದಾಳಿಯಿಂದ ಸಂತೋಷ್ ಅವರ ಎರಡೂ ಕೈಗಳಿಗೆ ಗಾಯವಾಗಿದೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದಾದ ಬಳಿಕ ಚಿರತೆ ಓಡಿ ಹತ್ತರದ ಅರಣ್ಯ ಭಾಗಕ್ಕೆ ನುಗ್ಗಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನು ಘಟನೆ ಮಾಹಿತಿ ಪಡೆದ ಅಂಕೋಲಾ ಪೊಲೀಸ್ ಠಾಣೆಯ ಪಿಎಐ ಚಂದ್ರಶೇಖರ್ ಮಠಪತಿ ಅವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡ ಈ ಕುರಿತು ಮಾಹಿತಿ ನೀಡಲಾಗಿದೆ. ಗ್ರಾಮದ ವಾಸಿಗಳು ಚಿರತೆಯ ಆಕಸ್ಮಿಕ ದಾಳೆಯಿಂದ ಆತಂಕದಲ್ಲಿದ್ದು, ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews