ತುಮಕೂರು : ಹೇಮಾವತಿ ನಾಲೆಗೆ ನೀರು | ಕೃಷಿಗೆ ಬಳಸಬಾರದು ಎಂದು ಡಿಸಿ ಎಚ್ಚರಿಕೆ

ತುಮಕೂರು : ಹೇಮಾವತಿ ಜಲಾಶಯ ಯೋಜನೆಯ ವ್ಯಾಪ್ತಿಯಲ್ಲಿ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆ ಪೂರಣೆಯಾಗುವಂತೆ, ನಿಗದಿತ ಪ್ರಮಾಣದ ನೀರನ್ನು ನಾಲೆಗಳ ಮೂಲಕ ಕೆರೆ-ಕಟ್ಟೆಗಳಿಗೆ ಹರಿಸಲಾಗುತ್ತಿದೆ. ಆದರೆ, ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹೇಮಾವತಿ ಜಲಾಶಯದ ಕುಡಿಯುವ ನೀರಿನ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀರನ್ನು ಹರಿಸುವ ಅವಧಿ ತಾತ್ಕಾಲಿಕವಾಗಿದ್ದು, ಮುಂಗಾರು ಮಳೆಗಾಲದ ಸ್ಥಿತಿಗತಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಜಿಲ್ಲಾಧಿಕಾರಿ ಅವರು, ಯೋಜನಾ ವ್ಯಾಪ್ತಿಯಲ್ಲಿ ನೀರಿನ ದುರ್ಬಳಕೆ ನಡೆಯದಂತೆ ಸಂಬಂಧಿತ ಅಧಿಕಾರಿಗಳಿಗೆ ಕಡ್ಡಾಯ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರು, ರೈತರು ನೀರಿನ ಸಮರ್ಪಕ ಬಳಕೆಗಾಗಿ ಜಾಗರೂಕತೆಯಿಂದ ನಡೆಯಬೇಕು. ತುರ್ತು ಪರಿಸ್ಥಿತಿಗಳಲ್ಲಿ ನೀರಿನ ಪ್ರಮಾಣ ಅಥವಾ ಹರಿವಿನಲ್ಲಿ ಬದಲಾವಣೆ ಸಾಧ್ಯವಾಗುವ ಕಾರಣ, ನೀರಿನ ನಿರ್ವಹಣೆಯಲ್ಲಿ ಸಹಕಾರ ನೀಡುವಂತೆ ಸಾರ್ವಜನಿಕರನ್ನು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ, ಅಪಾಯಕಾರಿಯಾದ ಚಟುವಟಿಕೆಗಳಾದ ನಾಲೆಯಲ್ಲಿ ಈಜು, ಬಟ್ಟೆ ತೊಳೆಯುವುದು, ದನ-ಕರುಗಳನ್ನು ತೊಳೆಯುವುದು, ಸೆಲ್ಫಿ ತೆಗೆಯುವುದು ಮತ್ತು ಸೇತುವೆಗಳ ಮೇಲೆ ಸಂಚರಿಸುವುದನ್ನು ತಡೆಯಬೇಕು ಎಂದು ಸೂಚಿಸಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಈಜು ಹಾಗೂ ನೀರಿನ ಸುತ್ತಲಿನ ಅಪಾಯಗಳಿಂದ ದೂರ ಇರಿಸಬೇಕು ಎಂದು ಹೇಳಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews