ತುಮಕೂರು : ಇನ್ನೇನು ಕೆಲವೇ ತಿಂಗಳಲ್ಲಿ ಗಣಪತಿ ಹಬ್ಬ ಬರ್ತಾ ಇದ್ದು, ಈ ಬಾರಿಯೂ ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಹಿಂದೂ ಜಾಗರಣ ವೇದಿಕೆ ಸಕಲ ತಯಾರಿ ಆರಂಭಿಸಿದ್ದು, ಇಂದು ಪೂರ್ವ ಸಿದ್ಧತಾ ಸಭೆಯನ್ನು ನಡೆಸಲಾಯ್ತು. ತುಮಕೂರಿನ ರಾಮಾನುಜಾ ಭವನದಲ್ಲಿ ಹಿಂದೂ ಮಹಾಗಣಪತಿ ಪೂರ್ವ ಸಿದ್ಧತಾ ಸಭೆಯನ್ನು ಆಯೋಜಿಸಿದ್ದು, ಪೂರ್ವಭಾವಿ ಸಭೆಯಲ್ಲಿ ನೂರಾರು ಮಂದಿ ಹಿಂದೂ ಜಾಗರಣ ವೇದಿಕೆಯ ಮುಖಂಡರು ಭಾಗಿಯಾಗಿ ಈ ಬಾರಿ ಯಾವ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಚರ್ಚಿಸಲಾಯ್ತು.
ತುಮಕೂರಿನಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಹಿಂದೂ ಮಹಾ ಗಣಪತಿ ಮಹೋತ್ಸವದಂತೆ ಈ ವರ್ಷವೂ ಕೂಡ ಹಿಂದೂ ಮಹಾಗಣಪತಿ ಮಹೋತ್ಸವು ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಡೆಸಲು ಸಭೆಯನ್ನು ನಡೆಸಲಾಯ್ತು. ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಲ್ಲದೇ ಮಹೋತ್ಸವದ ರೂಪುರೇಷೆಯನ್ನು ಸಿದ್ಧಪಡಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ವಿಜೃಂಭಣೆಯಿಂದ ವಿಸರ್ಜನಾ ಮಹೋತ್ಸವ ನಡೆಯುತ್ತದೆ. ಕಳೆದ ಬಾರಿ ಹಲವಾರು ಕಲಾತಂಡಗಳನ್ನು ಕಡಿಮೆ ಮಾಡಲಾಗಿತ್ತು. ಆದ್ರೆ ಈ ವರ್ಷ ಎಲ್ಲಾ ಕಲಾ ತಂಡಗಳು ಭಾಗಿಯಾಗಲಿದ್ದು, ಪ್ರದರ್ಶನ ನೀಡಲಿವೆ, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ ಯಂತೆಯೇ ಈ ಬಾರಿ ತುಮಕೂರಿನಲ್ಲಿ ಅದ್ಧೂರಿ ಮಹಾಗಣಪತಿ ವಿಸರ್ಜನೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಂಜು ಭಾರ್ಗವ ತಿಳಿಸಿದರು.
ಇನ್ನು ಈ ಬಗ್ಗೆ ಹಿಂದೂ ಮುಖಂಡ ಮಾರಣ್ಣ ಪಾಳೆಗಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಗಸ್ಟ್ 27 ನೇ ತಾರೀಕು ಗಣಪತಿ ಸ್ಥಾಪನೆ ಮಾಡಲಿದ್ದೇವೆ. ಈ ವರ್ಷ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಜನಸಂಖ್ಯೆ ಸೇರಬಹುದು ಎಂದು ಯೋಚಿಸಿದ್ದೇವೆ. ಕನಿಷ್ಠ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.