CHIKKABALLAPURA NEWS : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭ, 'ಲಿಪಿ-ಮನೆ' ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ 70 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸೌರ ಘಟಕದಿಂದ ರೈತರಿಗೆ ದಿನಕ್ಕೆ 5 ಗಂಟೆಗಳ ಕಾಲ, 3 ಫೇಸ್ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿದೆ. ಇದರಿಂದ ಪಂಪ್ ಸೆಟ್ಗಳಿಗೆ ನಿರ್ಬಂಧವಿಲ್ಲದ ವಿದ್ಯುತ್ ಲಭ್ಯತೆ, ಹಾಗೂ ವಿದ್ಯುತ್ ಅಪವ್ಯಯ ತಡೆಗಟ್ಟುವ ಸಾಧ್ಯತೆ ಹೆಚ್ಚಿದೆ ಎಂದರು.
ಇನ್ನು "ಪ್ರತಿ ವರ್ಷ ₹19,000 ಕೋಟಿ ರೂ. ಪಂಪ್ ಸೆಟ್ ಸಬ್ಸಿಡಿಗೆ ನೀಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ವೇಳೆ ಈ ಯೋಜನೆ ಪ್ರಾರಂಭವಾಗಲೇ ಇಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಪುನರಾರಂಭ ಮಾಡಿದೆವು," ಎಂದು ಹೇಳಿದರು.
"ಈ ಯೋಜನೆಗೆ ಹೆಸರು ಮಾತ್ರ ಕೇಂದ್ರದ್ದು. ಕೇಂದ್ರವು ಕೇವಲ ಶೇ.30% ಹಣ ನೀಡುತ್ತದೆ. ಉಳಿದ ಶೇ.50% ರಾಜ್ಯ ಸರ್ಕಾರ ಹಾಗೂ ಶೇ.20% ಹೂಡಿಕೆದಾರರು ನೀಡುತ್ತಾರೆ. ಒಂದು ಮೆಗಾ ವ್ಯಾಟ್ ನಿರ್ಮಾಣಕ್ಕೆ 3 ಕೋಟಿ ರೂ. ಬೇಕಾದರೆ, ಅದರಲ್ಲೂ ಕೇಂದ್ರದ ಪಾಲು ಕೇವಲ 1 ಕೋಟಿ ರೂ. ಮಾತ್ರ."
"ನಾವು ಅಧಿಕಾರಕ್ಕೆ ಬಂದ ನಂತರ 4,000 ಮೆ.ವ್ಯಾ ಹೆಚ್ಚಿಸಿ, ರಾಜ್ಯದ ಒಟ್ಟು ಉತ್ಪಾದನೆಯನ್ನು 30,000 ಮೆ.ವ್ಯಾಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ 60,000 ಮೆ.ವ್ಯಾ ಗುರಿಯಿದೆ. ಇದು ರೈತರ ವಿದ್ಯುತ್ ತೊಂದರೆಯ ಬಹುದೊಡ್ಡ ಪರಿಹಾರವಾಗಲಿದೆ," ಎಂದು ಅವರು ಹೇಳಿದರು.
ಚುನಾವಣೆ ಮೊದಲು ಕೊಟ್ಟ ಭರವಸೆಗಳ ಬಹುಪಾಲನ್ನು ಈಡೇರಿಸಿ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ನುಡಿದಂತೆ ನಡೆಯುವ ಪರಂಪರೆಯನ್ನು ಮುಂದುವರೆಸುತ್ತೇವೆ ಎಂದರು.