ಚಿಕ್ಕನಾಯಕನಹಳ್ಳಿ : ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪ್ರತಿಷ್ಠಿತ ಬಡಾವಣೆಯೊಂದು ಗಬ್ಬೆದ್ದು ನಾರುತ್ತಿದೆ. ಮನೆಗಳ ಅಕ್ಕಪಕ್ಕದಲ್ಲಿಯೇ ಪಾಳುಬಿದ್ದಿರುವ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ರಸ್ತೆ ಸರಿಯಿಲ್ಲದೆ ನೀರು ನಿಂತು ರೋಗರುಜನೆಗಳ ತಾಣವಾಗುತ್ತಿದೆ. ವಾಹನ ಸವಾರರಂತೂ ಜೀವಭಯದಲ್ಲಿ ಓಡಾಡುವಂತಾಗಿದೆ. ಇತ್ತ ರಸ್ತೆಯಲ್ಲಿ ವಿದ್ಯುತ್ ದೀಪವಿಲ್ಲದೆ ಜನ ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಕ್ಯಾರೆ ಎನ್ನುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ 15ನೇ ವಾರ್ಡ್ ಉಡೇವು ಬೀದಿ ಜನರ ದುಸ್ಥಿತಿ ಇದು. ಈ ವಾರ್ಡ್ನ್ನು ಈಗಾಗಲೇ ಪುರಸಭೆಯು ಅಭಿವೃದ್ಧಿ ಹೊಂದಿರುವ ವಾರ್ಡ್ ಅಂತಾ ಕರೆದಿದೆ. ಆದರೆ, ಅಲ್ಲಿ ಯಾವುದೇ ಅಭಿವೃದ್ಧಿ ಕಾಣ್ತಿಲ್ಲ. ವಾರ್ಡ್ನ ಜನರು ಓಡಾಡಲು ಸರಿಯಾದ ರಸ್ತೆ ಇಲ್ಲದೆ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಪುರಸಭೆ ನಿರ್ಲಕ್ಷ್ಯಕ್ಕೆ ವಾರ್ಡ್ನ ನಿವಾಸಿಗಳು ನಿತ್ಯ ನರಕ ಅನುಭವಿಸುವಂತಾಗಿ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಮ್ಮ ಬಡಾವಣೆಯಲ್ಲಿ ಆರೇಳು ತಿಂಗಳಿಂದ ರಸ್ತೆಯಲ್ಲಿ ನೀರು ನಿಂತು ಓಡಾಡಲು ಆಗುತ್ತಿಲ್ಲ. ನಾವು ಗಲೀಜು ನೀರಿನ ವಾಸನೆಯನ್ನೇ ಕುಡಿದುಕೊಂಡು ಬದುಕ್ತಾ ಇದಿವಿ. ಎಷ್ಟೇ ಬಾರಿ ಪುರಸಭೆ ಅಧಿಕಾರಿಗಳಿಗೆ, ವಾರ್ಡ್ನ ಮೆಂಬರ್ಗೆ ಹೇಳಿದ್ರೂ ಕ್ಯಾರೆ ಎನ್ನುತ್ತಿಲ್ಲ. ವೋಟ್ ಹಾಕಿಸಿಕೊಳ್ಳಲು ಮಾತ್ರ ಅವರು ಬರ್ತಾರೆ, ಆಮೇಲೆ ಈ ಕಡೆ ತಲೆಹಾಕಿ ಕೂಡ ನೋಡಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಬಡಾವಣೆ ನಿರ್ಮಾಣಗೊಂಡು ದಶಕಗಳಾದರೂ ಡಾಂಬರ್ ಕಂಡಿಲ್ಲವಂತೆ. ರಸ್ತೆ ಬದಿಗಳಲ್ಲಿ ಬೆಳೆದ ಕಾಡುಪೊದೆಗಳು ವಿಷಜಂತುಗಳ ಆಶ್ರಯ ತಾಣವಾಗಿವೆ. ಬಡಾವಣೆಯ ಕೆಲ ಕಡೆಗಳಲ್ಲಿ ಜನರು ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಈ ಕಾರಣಕ್ಕೆ ಸುತ್ತಮುತ್ತಲ ಪ್ರದೇಶ ಕಲುಷಿತಗೊಳ್ಳುತ್ತಿದ್ದು, ಸಾರ್ವಜನಿಕರು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಿ ಬಡಾವಣೆಯ ಜನರ ಗೋಳನ್ನು ಕೇಳಬೇಕಿದೆ.