ಗುಬ್ಬಿ : ಗುಬ್ಬಿಪಟ್ಟಣದ ಹೊರವಲಯದ ಹೇರೂರು ಬಳಿಯ ಭೂಮಿ ಪಬ್ಲಿಕ್ ಸ್ಕೂಲ್ನ ಪಕ್ಕದ ರಸ್ತೆಯಲ್ಲಿದ್ದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗಂಗಾಧರಯ್ಯ ಎಂಬುವವರ ಮಾವಿನ ತೋಟದಲ್ಲಿ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು 2 ದಿನಗಳಿಂದ ಜಮೀನಿಗೆ ತೆರಳದ ಜಮೀನಿನ ಮಾಲೀಕ ಗಂಗಾಧರಯ್ಯ ಇಂದು ಬೆಳಗ್ಗೆ ಮಾವಿನ ತೋಟಕ್ಕೆ ಹೋದಂತಹ ವೇಳೆ ಶವ ಕೊಳೆ ಸ್ಥಿತಿಯಲ್ಲಿ ಸಿಕ್ಕಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವ ಪತ್ತೆಗೆ ಮುಂದಾಗಿದ್ದು, ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯ್ತು.
ಇನ್ನು ಅಪರಿಚಿತ ಶವ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ವ್ಯಕ್ತಿಯನ್ನು ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ಶವವನ್ನು ಬಿಸಾಡಿದ್ದಾರಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಅನುಮಾನ ಎದ್ದಿದ್ದು ಪೊಲೀಸರ ತನಿಖೆಯಲ್ಲಿ ತಿಳಿದುಬರಲಿದೆ. ಇತ್ತ ಶವ ಪತ್ತೆಗೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಾಣೆಯಾಗಿದ್ದವರ ಮಾಹಿತಿಯ ಜಾಡು ಹಿಡಿದಿದ್ದು, ಕಾಣೆಯಾಗಿದ್ದವರೇ ಶವವಾಗಿ ಪತ್ತೆಯಾಗಿದ್ದಾರಾ ಎಂದು ತಿಳಿಯಲು ಪೊಲೀಸರು ಮುಂದಾಗಿದ್ದಾರೆ.