ಬೆಂಗಳೂರು : ಮಂಡ್ಯದಲ್ಲಿ ತಪಾಸಣೆ ವೇಳೆ ಅಪಘಾತ | ಡಿಜಿಪಿ ಡಾ. ಎಂ.ಎ. ಸಲೀಂ ಖಡಕ್ ಸೂಚನೆ

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಟ್ರಾಫಿಕ್‌ ಪೊಲೀಸರ ತಪಾಸಣೆ ವೇಳೆ ಮಗು ಮೃತಪಟ್ಟ ಘಟನೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಎಚ್ಚೆತ್ತಿದ್ದು, ರಾಜ್ಯದ ಡಿಜಿಪಿ-ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಸೂಚನೆಗಳನ್ನು ಜಾರಿಗೊಳಿಸಿದ್ದಾರೆ.

ಹೌದು ಡಿಜಿಪಿ-ಐಜಿಪಿ ಡಾ| ಸಲೀಂ ಹೊರಡಿಸಿರುವ ಸುತ್ತೋಲೆಯಲ್ಲಿ ವಾಹನ ತಪಾಸಣೆಯ ಸಮಯದಲ್ಲಿ ಎಚ್ಚರಿಕೆ ಹಾಗೂ ನಿಯಮಬದ್ಧತೆ ಪಾಲಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. "ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುವುದು ಸರಿಯಲ್ಲ. ವಾಹನ ತಪಾಸಣೆ ವೇಳೆ ಪ್ರತಿಯೊಬ್ಬ ಪೊಲೀಸರು ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ರಸ್ತೆಯಲ್ಲಿ ದಿಢೀರನೇ ಬಂದು ವಾಹನಗಳನ್ನು ಅಡ್ಡಗಟ್ಟುವುದಾಗಲಿ ಅಥವಾ ವಾಹನಗಳ ಕೀ ಕೈ ತೆಗೆದುಕೊಳ್ಳವುದಾಗಲಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆಗಳು ಕಂಡು ಬಂದಲ್ಲಿ ಮಾತ್ರ ವಾಹನ ತಡೆ ತಪಾಸಣೆ ನಡೆಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  1. ಹೆದ್ದಾರಿಗಳಲ್ಲಿ ಝಿಗ್‌ ಝಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು.  
  2. ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
  3. ಬೈಕ್‌ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿ ಕೈ ಕಿತ್ತುಕೊಳ್ಳಬಾರದು.
  4. ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಬೆನ್ನಟ್ಟಿ ಹಿಡಿಯಬಾರದು. ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.
  5. ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಗೆ ರಿಫ್ಲೇಕ್ಟಿವ್‌ ಜಾಕೆಟ್‌ಗಳನ್ನು ಪೊಲೀಸರು ಧರಿಸಬೇಕು. ಸಂಜೆ ವೇಳೆ ಕಡ್ಡಾಯವಾಗಿ ಎಲ್‌ಇಡಿ ಬ್ಯಾಟನ್ ಗಳನ್ನು ಉಪಯೋಗಿಸಬೇಕು ಹಾಗೂ ಕಡ್ಡಾಯವಾಗಿ ಬಾಡಿ ವೋರ್ನ್‌ ಕ್ಯಾಮೆರಾ ಧರಿಸಬೇಕು.
  6. ಸಂಚಾರ ನಿರ್ವಹಣಾ ಕೇಂದ್ರ ಅಥವಾ ಇಂಟೆಲಿಜೆಟ್‌ ಸಂಚಾರ ನಿರ್ವಹಣಾ ವ್ಯವಸ್ಥೆ (ಐಟಿಎಂಎಸ್‌) ಘಟಕದವು ಸಂಪರ್ಕ ರಹಿತಾ ಪ್ರವರ್ತನಾ ಮೂಲಕ ಪ್ರಕರಣಗಳನ್ನು ದಾಖಲಿಸಬೇಕು.
  7. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಜನ ಜಾಗೃತಿ ಅಭಿಯಾನ ನಡೆಸಬೇಕು.
  8. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸೇರಿ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು. ಇಂತಹ ವಾಹನಗಳ ವಿರುದ್ಧ ಎಸ್‌ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳನ್ನು ಅನುಸರಿಬೇಕು.
  9. ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಫ್ಲೇಕ್ಟಿವ್‌ ರಬ್ಬರ್ ಕೋನ್‌ಗಳನ್ನು ಹಾಗೂ ಸುರಕ್ಷತಾ ಸಲಕರಣೆಗಳನ್ನು ಅಳವಡಿಸುವುದು.
  10. ರಾತ್ರಿ ಮತ್ತು ತಡರಾತ್ರಿ ವೇಳೆ ಸಂಚಾರ ಸಿಗ್ನಲ್ ದೀಪಗಳಿರುವ/ಜಂಕ್ಷನ್‌ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕು.
  11. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಾಕಾ ಬಂಧಿ ಪ್ರಕ್ರಿಯೆಗಳನ್ನು ಹೆದ್ದಾರಿಗಳಲ್ಲಿ ನಡೆಯಬಾರದು.
  12. ತಪಾಸಣೆಯ ಸಂದರ್ಭದಲ್ಲಿ ಸಂಚಾರ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು. ಸುತ್ತೋಲೆಯ ಎಲ್ಲಾ ಅಂಶಗಳ ಖಡ್ಡಾಯ ಪಾಲನೆಗೆ ಪೊಲೀಸ್‌ ಮಹಾ ನಿರ್ದೆಶಕ ಡಾ,ಎಂ ಸಲೀಂ ಸೂಚನೆ ನೀಡಿದ್ದಾರೆ.

 

 

Author:

...
Sushmitha N

Copy Editor

prajashakthi tv

share
No Reviews