DAKSHINA KANNADA NEWS : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಇಂದು ದುಃಖದ ಘಟನೆ ನಡೆದಿದೆ. ಆಟೋ ರಿಕ್ಷಾ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಚಾಲಕ ಶರತ್ ಕುಮಾರ್ (36) ಸ್ಥಳದಲ್ಲಿಯೇ ಅಸುನೀಗಿದ ಘಟನೆ ನಡೆದಿದೆ.
ಇನ್ನು ಮೃತ ವ್ಯಕ್ತಿ ಶರತ್ ಕುಮಾರ್ ಅವರು ಸಮೀಪದ ಕೆಂಪಕೋಡಿ ಗ್ರಾಮದ ನಿವಾಸಿಯಾಗಿದ್ದು, ರಘುರಾಮ ಮಡಿವಾಳ ಅವರ ಪುತ್ರರಾಗಿದ್ದರು. ಪ್ರತಿದಿನದಂತೆ ಶರತ್ ಅವರು ಶಾಲಾ ಮಕ್ಕಳನ್ನು ತಮ್ಮ ಆಟೋದಲ್ಲಿ ಬಿಟ್ಟು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಾರ್ಗಮಧ್ಯದಲ್ಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ವಾಹನ ಚಲಾಯಿಸುತ್ತಿದ್ದಾಗಲೇ ಬಿದ್ದು ಹೋಗಿದ್ದಾರೆ.
ಇನ್ನು ಘಟನೆಯನ್ನ ಗಮನಿಸಿದ ಸ್ಥಳೀಯರು ತಕ್ಷಣವೇ ಶರತ್ ಅವರನ್ನು ಕೊಕ್ಕಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ವೈದ್ಯರು ಪರಿಶೀಲನೆ ನಡೆಸಿದ್ದು, ಅವರು ಮೃತಪಟ್ಟಿರುವುದು ದೃಢಪಡಿಸಿದ್ದಾರೆ. ಶರತ್ ಅವರು ತಮ್ಮ ಕುಟುಂಬದ ಏಕೈಕ ಆರ್ಥಿಕ ಆಧಾರಸ್ತಂಭರಾಗಿದ್ದು, ಅವರ ನಿಧನದಿಂದ ಕುಟುಂಬಕ್ಕೆ ಅಚ್ಚರಿಯ ಆಘಾತ ಉಂಟಾಗಿದೆ.