BANGALORE : ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದಿಂದ ತೋತಾಪುರಿ ಮಾವು ಖರೀದಿಗೆ ನಿಷೇಧ ಹೇರಿರುವುದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರದ ಮುಖ್ಯಮಂತ್ರಿ ನಂದಮೂರಿ ಚಂದ್ರಬಾಬು ನಾಯ್ಡುಗೆ ಪತ್ರ ಬರೆದು, ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ತೋತಾಪುರಿ ಮಾವುಗಳನ್ನು ದೊಡ್ಡ ಪ್ರಮಾಣದಲ್ಲಿ ಆಂಧ್ರಪ್ರದೇಶಕ್ಕೆ ರಫ್ತು ಮಾಡುತ್ತಿದ್ದರು. ಆದರೆ ಈಗಿನ ನಿಷೇಧದಿಂದಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಬೇಸಿಗೆ ಕಾಲದಲ್ಲಿ ತಾಜಾ ಹಣ್ಣು ಮಾರಾಟವೇ ರೈತರ ಪ್ರಮುಖ ಆದಾಯದ ಮೂಲವಾಗಿರುವುದರಿಂದ ಈ ನಿರ್ಧಾರವು ಅವರ ಜೀವನಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.
ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ, "ಈ ನಿರ್ಧಾರದಿಂದ ಎರಡು ರಾಜ್ಯಗಳ ರೈತ ಬಂಧುಗಳ ನಡುವಿನ ಭಾವನಾತ್ಮಕ ಹಾಗೂ ಆರ್ಥಿಕ ಸಂಬಂಧದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಹಕಾರದ ಮನೋಭಾವದಿಂದ ಇದನ್ನು ಪರಿಗಣಿಸಿ, ತಕ್ಷಣವೇ ನಿಷೇಧವನ್ನು ಹಿಂಪಡೆಯಬೇಕಾಗಿ ವಿನಂತಿ" ಎಂದಿದ್ದಾರೆ.