GUBBI : ತುಮಕೂರಲ್ಲಿ ಹೇಮಾವತಿ ಕಿಚ್ಚು ಹೆಚ್ಚಾಗಿತ್ತು. ಗುಬ್ಬಿಯ ಸುಂಕಾಪುರದಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ನಿಲ್ಲಿಸಲು ಪಣತೊಟ್ಟು ಹೋರಾಟ ನಡಸಿದರು. ಕೊನೆಗೂ ಹೋರಾಟಗಾರರಿಗೆ ಜಯಸಿಕ್ಕಿತ್ತು. ನಿಷೇಧಾಜ್ಞೆಯನ್ನು ಮೀರಿ ಹೋರಾಟ ನಡೆಸಿದ ಕಾರಣಕ್ಕೆ ಹಲವರ ಮೇಲೆ ಎಫ್ ಐಆರ್ ಕೂಡ ದಾಖಲಾಗಿತ್ತು. ಇತ್ತ ಕೆಲವರನ್ನು ಜೈಲಿಗೂ ಕೂಡ ಕಳುಹಿಸಿದ್ದರು. ಕೆಲ ದಿನಗಳ ಸೆರೆಮನೆ ವಾಸ ಅನುಭವಿಸಿ ಹೊರಬಂದ ನಾಲ್ವರು ಹೋರಾಟಗಾರರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ ಗುಬ್ಬಿಯಲ್ಲಿ ನಾಗರೀಕರು ಆಯೋಜಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ಸರ್ಕಲ್ ಬಳಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ನೀರಿಗಾಗಿ ಹೋರಾಟ ನಡೆಸಿ ಜೈಲು ಸೇರಿ ಹೊರ ಬಂದ ಆನಂದ್, ಶರತ್, ಲೋಕೇಶ್, ಚೇತನ್ ಈ ಹೋರಾಟಗಾರರಿಗೆ ಹಾಗೂ ಇವರ ಪರ ಕಾನೂನು ಹೋರಾಟ ನಡೆಸಿದ ವಕೀಲ ಎಂ.ಡಿ.ಸುರೇಶ್ ಇವರಿಗೆ ನಾಗರೀಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಬಿಜೆಪಿ ಮುಖಂಡ ದಿಲೀಪ್ ಜೈಲಿಂದ ಹೊರಬಂದವರನ್ನು ಸನ್ಮಾನಿಸಿ ಮಾತನಾಡಿದ ಅವರು, ಹೇಮಾವತಿ ನೀರಿಗಾಗಿ ಸಾವಿರಾರು ರೈತರು ಹೋರಾಟಕ್ಕೆ ಧುಮುಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸುವ ಹೋರಾಟ ಹತ್ತಿಕ್ಕುವ ಕೆಲಸ ಮಾಡಿತ್ತು. ಇದಕ್ಕೆ ಪೊಲೀಸರನ್ನು ಬಳಸಿ ಸರ್ಕಾರ ಆಡಳಿತ ಅಧಿಕಾರ ದುರ್ಬಳಕೆ ಮಾಡಿತ್ತು. ಇದನ್ನು ಸಹಿಸದ ರೈತರು ಕೆಲ ಕಾಲ ಆಕ್ರೋಶ ಹೊರ ಹಾಕಿದ ಸಮಯ ಹೇಮಾವತಿ ಹೋರಾಟಗಾರರ ವಿರುದ್ಧ ಕೇಸು ದಾಖಲಿಸಿ ಕೆಲವರನ್ನು ಜೈಲಿಗೆ ಕಳಿಸಲಾಗಿತ್ತು. ಯಾವುದೇ ಅಪರಾಧ ಕೃತ್ಯ ಮಾಡದೆ ನಮ್ಮ ಜನರ ನೀರು ಉಳಿಸಲು ಜೈಲಿಗೆ ಹೋದ ಹಿನ್ನಲೆ ಅವರನ್ನು ಗೌರವಿಸಲಾಗಿದೆ ಎಂದರು.
ಇನ್ನು ಇದೇ ವೇಳೆ ಹೇಮೆ ಹೋರಾಟದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದ ಹೋರಾಟಗಾರರು ಕೂಡ ಮಾತನಾಡಿದರು. ಜೊತೆಗೆ ಹೋರಾಟಗಾರರ ಪರವಾಗಿ ವಾದ ಮಾಡಿ ಬಿಡಿಸಿದ ವಕೀಲರು ಕೂಡ ಮಾತನಾಡಿದರು. ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಮುಖಂಡರಾದ ಪಿ.ಬಿ.ಚಂದ್ರಶೇಖರ್ ಬಾಬು, ಸಿ.ಆರ್.ಶಂಕರಕುಮಾರ್, ಪಪಂ ಸದಸ್ಯರಾದ ಶಿವಕುಮಾರ್,ಪಂಚಾಕ್ಷರಿ, ಯತೀಶ್, ಹಾಜರಿದ್ರು.