BMRCL Floats DPR Tender For Bengaluru–Tumakuru Metro : ತುಮಕೂರಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಲು ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಶನಿವಾರ ಟೆಂಡರ್ ಕರೆದಿದೆ.

ಸಂಬಂಧಿಸಿದ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಶನಿವಾರ ಟೆಂಡರ್ ಪ್ರಕಟಿಸಿದೆ.
ಸದ್ಯದಲ್ಲೇ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಮಾದಾವರದವರೆಗೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ನಡೆಯುತ್ತಿದೆ. ಹೊಸದಾಗಿ ಪ್ರಸ್ತಾಪವಾಗಿರುವ 59.6 ಕಿಮೀ ಉದ್ದದ ಮಾರ್ಗವು ಮಾದಾವರದಿಂದ ತುಮಕೂರುವರೆಗೆ ವಿಸ್ತರಣೆ ಹೊಂದಲಿದೆ.
ರಾಜ್ಯದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಿ ಬೊಮ್ಮಸಂದ್ರ–ಹೊಸೂರು ಮಾರ್ಗದ ಜೊತೆಯೇ ಈ ಯೋಜನೆಯೂ ಪ್ರಮುಖತೆಯನ್ನು ಪಡೆದಿದೆ.
PP ಮಾದರಿಯಲ್ಲಿ ಯೋಜನೆ ಜಾರಿ
ಮಾದಾವರ–ತುಮಕೂರು ಕಾರಿಡಾರ್ಗೆ ಸಂಬಂಧಿಸಿದ ಕಾರ್ಯಸಾಧ್ಯತಾ ಅಧ್ಯಯನವನ್ನು ರಾಜ್ಯ ಸರ್ಕಾರ ಮೇ ತಿಂಗಳಲ್ಲಿ ಸ್ವೀಕರಿಸಿದ್ದು, ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ಅನುಮೋದನೆ ನೀಡಿದೆ.
ಸುಮಾರು ₹20,649 ಕೋಟಿ ವೆಚ್ಚವಾಗುವ ನಿರೀಕ್ಷೆಯಿರುವ ಈ ಯೋಜನೆಗೆ ನವೆಂಬರ್ 20ರೊಳಗೆ 4.5 ಲಕ್ಷ ರೂ. ಇಎಂಡಿ (EMD) ಸಹಿತ ಟೆಂಡರ್ ಸಲ್ಲಿಸಲು ಸೂಚಿಸಲಾಗಿದೆ.
ಬಿಡ್ಗಳ ಮೌಲ್ಯಾಂಕನ, ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆ ಪರಿಶೀಲನೆ ಮುಗಿಯಲು ಕನಿಷ್ಠ 5–6 ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು BMRCL ಮೂಲಗಳು ತಿಳಿಸಿವೆ. ಅಂತಿಮವಾಗಿ ಗುತ್ತಿಗೆದಾರರನ್ನು ಆಯ್ಕೆ ಮಾಡಿದ ನಂತರ ಡಿಪಿಆರ್ ತಯಾರಿಕೆಗೆ 4–5 ತಿಂಗಳು ಅಗತ್ಯವಿರಲಿದೆ.
ಇದನ್ನು ಓದಿ : ಮದುವೆಗೆ ಒಂದು ಗಂಟೆ ಇರುವಾಗಲೇ ವರನಿಂದ ವಧು ಹತ್ಯೆ..!
25 ಎತ್ತರದ ನಿಲ್ದಾಣಗಳ ನಿರ್ಮಾಣ ಸಾಧ್ಯತೆ
ಮಾದಾವರದ BIEC ನಿಂದ ಆರಂಭವಾಗುವ ಈ ಕಾರಿಡಾರ್ ಮೂಲಕ ನೆಲಮಂಗಲ, ದಾಬಸ್ಪೇಟೆ, ಕ್ಯಾತ್ಸಂದ್ರ ಸೇರಿದಂತೆ ಅನೇಕ ಪ್ರಮುಖ ಕೈಗಾರಿಕಾ ಮತ್ತು ವಸತಿ ಪ್ರದೇಶಗಳನ್ನು ಮೆಟ್ರೋ ಸಂಪರ್ಕಿಸಲಿದೆ. ಒಟ್ಟು 25 ಎಲೆವೆಟೆಡ್ ನಿಲ್ದಾಣಗಳ ನಿರ್ಮಾಣ ಪ್ರಸ್ತಾಪಿಸಲಾಗಿದೆ.
ಸಂಭಾವ್ಯ ನಿಲ್ದಾಣಗಳು
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ, ಹಾಗೂ ಶಿರಾ ಗೇಟ್.
ಪ್ರತಿ ಗಂಟೆಗೆ 15,000 ಪ್ರಯಾಣಿಕರ ಸಂಚಾರ ಸಾಧ್ಯತೆ
ಕಾರ್ಯಸಾಧ್ಯತಾ ವರದಿ ಪ್ರಕಾರ, ಈ ಮಾರ್ಗದಲ್ಲಿ ಒಂದು ದಿಕ್ಕಿಗೆ ಪ್ರತಿ ಗಂಟೆ ಸುಮಾರು 15,000 ಪ್ರಯಾಣಿಕರನ್ನು ಸಾಗಿಸಲು ಸಾಮರ್ಥ್ಯ ಇದೆ. 4–5 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುವ ವ್ಯವಸ್ಥೆಯಿಂದ ತುಮಕೂರು–ಬೆಂಗಳೂರು ನಡುವಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಪ್ರಸ್ತುತ ರಸ್ತೆ ಮೂಲಕ ತುಮಕೂರಿಗೆ ಪ್ರಯಾಣಕ್ಕೆ ದಟ್ಟಣೆಯನ್ನು ಅವಲಂಬಿಸಿ ಸುಮಾರು ಎರಡು ಗಂಟೆಗಳು ಬೇಕಾಗಿದೆ.
ರೈಲುಗಳ ಸಂಖ್ಯೆ ಹೆಚ್ಚಿದ್ದರೂ ಅವುಗಳ ಆವರ್ತನ ಕಡಿಮೆ ಎಂಬ ಸಮಸ್ಯೆಗೆ ಮೆಟ್ರೋ ಸೂಕ್ತ ಪರ್ಯಾಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ನೋಡಿ : ತುಮಕೂರಿಗರಿಗೆ ಯುಜಿಡಿ ಕಂಟಕ – ಗಬ್ಬೇದ್ದು ನಾರುತ್ತಿದ್ರು ಪಾಲಿಕೆ ನಿರ್ಲಕ್ಷ್ಯ




