Vijay Rally Stampede : ನಟ ವಿಜಯ್ ಅವರು ತಮಿಳುನಾಡಿನ ಕರೂರಿನಲ್ಲಿ ಶನಿವಾರ ಆಯೋಜಿಸಿದ್ದ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಇದುವರೆಗೆ 39 ಜನರು ಸಾವನ್ನಪ್ಪಿದ್ದು, 20 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ವಿಜಯ್ ಅವರ ಜನಪ್ರಿಯತೆ ಹಿನ್ನೆಲೆಯಲ್ಲಿ ರ್ಯಾಲಿಗೆ ನಿರೀಕ್ಷೆಗೂ ಮೀರಿದ ಜನರು ಸೇರಿದ್ದರು. ಮೈದಾನದಲ್ಲಿ ನೂಕಾಟ, ತಳ್ಳಾಟ ಹೆಚ್ಚಾಗಿದ್ದರಿಂದ ಕೆಲವರು ನೆಲಕ್ಕುರುಳಿದ್ದು, ಕಾಲ್ತುಳಿತದ ಭೀತಿ ಉಂಟಾಯಿತು. 2026 ರ ವಿಧಾನಸಭಾ ಚುನಾ ವಣೆಗೆ ಪೂರ್ವಭಾವಿಯಾಗಿ ಎಲ್ಲಾ ಪಕ್ಷಗಳು ಪ್ರಚಾರ ನಡೆಸುತ್ತಿವೆ. ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಸೆಪ್ಟಂಬರ್ 13 ರಿಂದ ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅವರು ಶನಿವಾರ ನಮಕ್ಕಲ್ ಮತ್ತು ಕರೂರ್ ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ 10 ಸಾವಿರ ಜನ ಸೇರುವ ನಿರೀಕ್ಷೆ ಇತ್ತು ಎನ್ನಲಾಗಿತ್ತು. ಆದ್ರೆ 2 ಲಕ್ಷ್ ಜನ ಸೇರಿದ ಕಾರಣ ಈ ಕಾಲ್ತುಳಿತ ಸಂಭವಿಸಿದೆ.
ಕರೂರ್ ಜಿಲ್ಲೆಯಲ್ಲಿ ಸಂಜೆ 7 ಗಂಟೆಗೆ ನಡೆದ ಪ್ರಚಾರ ಸಭೆಯಲ್ಲಿ ಟಿವಿಕೆ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಭೆಯಲ್ಲಿ ವಿಜಯ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಒಬ್ಬ ಮಹಿಳೆ ಮೂರ್ಛೆ ಹೋದರು. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ಇದರ ನಂತರ, 30ಕ್ಕೂ ಹೆಚ್ಚು ಜನರು ಒಬ್ಬರ ನಂತರ ಒಬ್ಬರು ಮೂರ್ಛೆ ತಪ್ಪಿಬಿದ್ದರು. ಪೊಲೀಸರು ತಕ್ಷಣ ಪ್ರಜ್ಞಾಹೀನ ಜನರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 39 ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ಈ ಪರಿಸ್ಥಿತಿಯಲ್ಲಿ, ಜನಸಂದಣಿಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸ್ಟಾಲಿನ್ ಅವರು, ಅಲ್ಲಿನ ಎಲ್ಲಾ ಆಸ್ಪತ್ರೆ ಗಳನ್ನು ತಕ್ಷಣದ ಚಿಕಿತ್ಸೆಗೆ ಸಿದ್ಧವಾಗಿಡಲು ಆದೇಶಿಸಿದ್ದಾರೆ. ಅಲ್ಲದೆ ಸಚಿವರಾದ ಎಂ. ಸುಬ್ರಮಣಿಯನ್ ಮತ್ತು ಅನ್ಬಿಲ್ ಮಹೇಶ್ ಅವರನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ. ಜೊತೆ ಪ್ರಧಾನಿ ಮೋದಿಯವರು ಕೂಡ ಈ ಅವಘಡದಿಂದ ಆದ ಸಾವು ನೋವಿನ ಕುರಿತು ಸಂತಾಪ ಸೂಚಿಸಿದ್ದಾರೆ.