ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ನಾಯಕ Suresh Kalmadi ನಿಧನ.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಪುಣೆಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA)ನ ಮಾಜಿ ಅಧ್ಯಕ್ಷರಾಗಿದ್ದ ಕಲ್ಮಾಡಿ, ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ವೈಕುಂಠ ಸ್ಮಶಾನದಲ್ಲಿ ಅಂತ್ಯಕ್ರಿಯೆ
ಕುಟುಂಬದ ಮೂಲಗಳ ಪ್ರಕಾರ, ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2 ಗಂಟೆಯವರೆಗೆ ಎರಾಂಡ್ವಾನೆಯ ಕಲ್ಮಾಡಿ ಹೌಸ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮಧ್ಯಾಹ್ನ 3.30ಕ್ಕೆ ಪುಣೆಯ ನವಿ ಪೇತ್ನಲ್ಲಿರುವ ವೈಕುಂಠ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸುರೇಶ್ ಕಲ್ಮಾಡಿ ಯಾರು..?
Suresh Kalmadi ಪುಣೆಯ ಪ್ರಮುಖ ರಾಜಕೀಯ ನಾಯಕರಾಗಿದ್ದು, ಅವರು ಲೋಕಸಭೆಯಲ್ಲಿ ಹಲವು ಬಾರಿ ಪುಣೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1995–96ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಹಲವು ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಆಡಳಿತದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನು ಓದಿ : ಖರ್ಚಿಗೆ ಅಮ್ಮ ಹಣ ಕೊಡಲಿಲ್ಲ ಅಂತ ಬೆಂಕಿ ಹಚ್ಚಿಕೊಂಡ ಮಗ..!

ಕಾಮನ್ವೆಲ್ತ್ ಕ್ರೀಡಾಕೂಟ ವಿವಾದ
2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕಲ್ಮಾಡಿ ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಕ್ರೀಡಾಕೂಟದ ನಿಧಿಗಳ ದುರುಪಯೋಗ ಆರೋಪದಡಿ ಭ್ರಷ್ಟಾಚಾರ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಏಪ್ರಿಲ್ 2011ರಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸಿತ್ತು.
ಆಜೀವ ಅಧ್ಯಕ್ಷ
ವಿವಾದದ ಹೊರತಾಗಿಯೂ, ಕಲ್ಮಾಡಿ ಕ್ರೀಡಾ ಸಂಸ್ಥೆಗಳಲ್ಲಿ ಪ್ರಭಾವ ಬೀರುವುದನ್ನು ಮುಂದುವರೆಸಿದರು. 2016 ರಲ್ಲಿ, 150 ಕ್ಕೂ ಹೆಚ್ಚು ಸದಸ್ಯರ ಸಮಿತಿಯು ಅವರನ್ನು ಮತ್ತು ಅಭಯ್ ಸಿಂಗ್ ಚೌಟಾಲ ಅವರನ್ನು IOA ಯ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿತು. ಆದಾಗ್ಯೂ, ಕೇಂದ್ರ ಕ್ರೀಡಾ ಸಚಿವರು ಈ ನಿರ್ಧಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ ನಂತರ, ಕಲ್ಮಾಡಿ ಆ ಗೌರವವನ್ನು ನಿರಾಕರಿಸಿದರು. ಆಗಿನ ಐಒಎ ಅಧ್ಯಕ್ಷ ಎನ್. ರಾಮಚಂದ್ರನ್ ಅವರಿಗೆ ಬರೆದ ಪತ್ರದಲ್ಲಿ ಈ ಹುದ್ದೆಯನ್ನು ಸ್ವೀಕರಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದರು.

ವಾಯುಪಡೆಯಲ್ಲಿ ಪೈಲೆಟ್
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಸುರೇಶ್ ಕಲ್ಮಾಡಿ 1964ರಿಂದ 1972ರವರೆಗೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. 1974ರಲ್ಲಿ ವಾಯುಪಡೆಯಿಂದ ನಿವೃತ್ತರಾದ ನಂತರ ಅವರು ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದರು.

ಇದನ್ನು ನೋಡಿ : ರೌಡಿಶೀಟರ್ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಠಾಣೆಗೆ ಓಡಿ ಬಂದ ಗಂಡ!




