BANGALORE : ಐಪಿಎಲ್ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಇದೀಗ ಗಂಭೀರ ಕಾನೂನು ಚರ್ಚೆಗೆ ಕಾರಣವಾಗಿದೆ. 11 ಜನರ ಸಾವಿಗೆ ಕಾರಣವಾದ ಈ ಘಟನೆಗೆ ಸಂಭಂಧಿಸಿದಂತೆ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ) ರಾಜ್ಯ ಸರ್ಕಾರದ ವಿರುದ್ದ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರ ಮತ್ತು ಕ್ರೀಡಾ ಸಂಸ್ಥೆ ನಡುವಿನ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.
ಅರ್ಜಿಯಲ್ಲಿ, "ಸರ್ಕಾರವೇ ಆರ್ಸಿಬಿ (RCB) ತಂಡದ ಗೆಲುವಿನ ಸಂಭ್ರಮಾಚರಣೆಗೆ ಕರೆ ನೀಡಿತ್ತು" ಎಂದು ಕೆಎಸ್ಸಿಎ ಉಲ್ಲೇಖಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಆಟಗಾರರನ್ನು ಸನ್ಮಾನಿಸಲು ಮುಂಚೂಣಿಯಲ್ಲಿ ಇದ್ದರು ಎಂಬುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಣೆಗಾರಿಕೆ ತಪ್ಪಿಸಿಕೊಂಡು, ಕಾಲ್ತುಳಿತದ ಹೊರೆಯನ್ನ ಕೆಎಸ್ಸಿಎ ಮೇಲೆ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅಲ್ಲದೇ, ಜನದಟ್ಟಣೆಯ ನಿರ್ವಹಣೆ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲಿದ್ದು, ಆರ್ಸಿಬಿ ಮ್ಯಾನೇಜ್ಮೆಂಟ್ ಕಾರ್ಯಕ್ರಮ ಆಯೋಜಿಸಿದ್ದರೂ, ಕೆಎಸ್ಸಿಎ ಕೇವಲ ರಾಜ್ಯದ ಕ್ರಿಕೆಟ್ ಆಡಳಿತ ನಿರ್ವಹಣೆಗೆ ಜವಾಬ್ದಾರಿಯಾಗಿದೆ, ಎಂಬ ಸ್ಪಷ್ಟೀಕರಣ ನೀಡಲಾಗಿದೆ.
ಕೆಎಸ್ಸಿಎ ವಿರುದ್ಧ ಸರ್ಕಾರ ಮಾಧ್ಯಮಗಳ ಮೂಲಕ ಬಂಧನದ ಬೆದರಿಕೆ, ಅಧಿಕೃತವಾಗಿ ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ನಂತರ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಮೂಲಕ ಪ್ರಮುಖ ಅಧಿಕಾರಿಗಳಿಗೆ ರಾಜಕೀಯ ತೀವ್ರ ಒತ್ತಡವಿದ್ದು, ತಪ್ಪು ಹೊರೆ ಇತರರ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ರಿಟ್ ಅರ್ಜಿ ಉಲ್ಲೇಖಿಸಿದೆ.
ಈ ಘಟನೆಯ ಹಿನ್ನಲೆಯಲ್ಲಿ ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆದರೆ ಈ ಎಲ್ಲಾ ಕ್ರಮಗಳು ಜನ ಆಕ್ರೋಶದ ಹೊತ್ತಿನಲ್ಲಿ ನಡೆದ ರಾಜಕೀಯಾತ್ಮಾಕ ಪ್ರತಿಕ್ರಿಯೆಗಳಾಗಿದ್ದು, ಇದೀಗ ಈ ವಿವಾದ ಹೈಕೋರ್ಟ್ನ ಮೆಟ್ಟಿಲು ತಲುಪಿದ್ದು, ಸರ್ಕಾರ ಹಾಗೂ ಕೆಎಸ್ಸಿಎ ನಡುವೆ ನ್ಯಾಯಾಂಗ ತೀವ್ರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯದ ರಾಜಕೀಯ ಹಾಗೂ ಕ್ರೀಡಾ ವಲಯದಲ್ಲಿ ಇದರ ಪರಿಣಾಮಗಳು ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ.