ತುಮಕೂರು : ಇಂದು ಕಲ್ಪತರು ನಾಡು ತುಮಕೂರಿನಲ್ಲಿ ಕಣ್ಣು ಹಾಯಿಸಿದ್ದ ಕಡೆಯಲೆಲ್ಲಾ ಕಂಡದ್ದು ತ್ರಿವರ್ಣ ಧ್ವಜ. ಎಲ್ಲರ ಬಾಯಲ್ಲೂ ಭಾರತ್ ಮಾತಾ ಕಿ ಜೈ ಘೋಷ ವಾಕ್ಯ, ಎಲ್ಲರ ಕೈಯಲ್ಲೂ ಭಾರತದ ಧ್ವಜ. ದೇಶಕ್ಕಾಗಿ ಪ್ರಾಣ ಕೊಟ್ಟೆವು ಅಂತಾ ತಿರಂಗ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿ. ಇವೆಲ್ಲಾ ದೃಶ್ಯಗಳು ಭಾರತೀಯರ ದೇಶ ಪ್ರೇಮಕ್ಕೆ ಸಾಕ್ಷಿಯಾಯಿತೆಂದ್ರೆ ತಪ್ಪಾಗಲ್ಲ.
ಪಾಪಿ ಪಾಕಿಸ್ತಾನ ತನ್ನ ನರಿ ಬುದ್ದಿ ತೋರಿಸಿ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಬೆನ್ನಲ್ಲೇ ಭಾರತದ ಸೇನೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪಾಕ್ಗೆ ತಕ್ಕ ಉತ್ತರ ನೀಡಿದೆ. ಆಪರೇಷನ್ ಸಿಂಧೂರ ಸಕ್ಷಸ್ ಆದ ಬೆನ್ನಲ್ಲೇ ದೇಶಾದ್ಯಂತ ಬಿಜೆಪಿ ತಿರಂಗಯಾತ್ರೆ ನಡೆಸುತ್ತಿದ್ದು, ಈ ವೇಳೆ ಪಕ್ಷಾತೀತವಾಗಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಇಂದು ತುಮಕೂರಿನಲ್ಲೂ ರಾಷ್ಟ್ರೀಯ ರಕ್ಷಣೆಗಾಗಿ, ದೇಶ ಹಾಗೂ ಸೈನಿಕರ ಬೆಂಬಲಿಸಿ ಬೃಹತ್ ತಿರಂಗ ಯಾತ್ರೆಯನ್ನು ನಡೆಸಲಾಯಿತು.
ಎಸ್ಐಟಿಯಿಂದ ಆರಂಭವಾದ ಯಾತ್ರೆ ಗಂಗೋತ್ರಿ ರಸ್ತೆ, ಎಸ್ ಎಸ್ ಪುರಂ, ಸೋಮೇಶ್ವರ, ಜ್ಯೂನಿಯರ್ ಮೈದಾನದವರೆಗೂ ಸಾಗಿತು. ಈ ಯಾತ್ರೆಯಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ಗೌಡ, ಎಂಎಲ್ಸಿ ಜಗ್ಗೇಶ್, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸೈನಿಕರು, ಎನ್ ಸಿ ಸಿ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿದ ಸಂಘ ಸಂಸ್ಥೆಗಳು ಸೇರಿ ಪಕ್ಷಾತೀತವಾಗಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಯಾತ್ರೆ ಯುದ್ಧಕ್ಕೂ ಭಾರತ್ ಮಾತಾ ಕೀ ಜಯ ಘೋಷವನ್ನು ಮೊಳಗಿಸಿದರು. ಇಡೀ ನಗರವೇ ಇಂದು ತ್ರಿವರ್ಣ ಧ್ವಜದಿಂದ ಕಂಗೊಳಿಸಿತು.
ತಿರಂಗಯಾತ್ರೆಯಲ್ಲಿ ಮಾತನಾಡಿದ ಸಚಿವ ಸೋಮಣ್ಣ, 27 ನಿಮಿಷದಲ್ಲಿ ಉಗ್ರರಿಂದ 26 ಮಂದಿ ಸತ್ತಿದ್ದರು, ಆದರೆ ನಮ್ಮ ಸೈನಿಕರು ನೂರಾರು ಜನ ಉಗ್ರರನ್ನು ಹತ್ಯೆ ಮಾಡುವುದರ ಮೂಲಕ ಪಾಕ್ ಗೆ ಒಂದು ಸಣ್ಣ ಎಚ್ವರಿಕೆಯನ್ನು ಕೊಟ್ಟಿದ್ದಾರೆ. ರಾಷ್ಟ್ರದ ಜನರ ಪರವಾಗಿ ಸೈನಿಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ವಿಜಯೇಂದ್ರ ಮಾತನಾಡಿ, ತಿರಂಗಯಾತ್ರೆ ಇಡೀ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ಈ ಯಾತ್ರೆ ನಡೆಯುತ್ತಿಲ್ಲ, ಬದಲಾಗಿ ದೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಡೆಯುತ್ತಿದೆ. ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಅಭಿನಂದನೆ ಸಲ್ಲಿಸುವ ಸಲುವಾಗಿ ಈ ಯಾತ್ರೆ ನಡೆದಿದೆ ಎಂದರು.
ದೇಶಾದ್ಯಂತ ತಿರಂಗ ಯಾತ್ರೆ ನಡೆಯುತ್ತಿದ್ದು, ಪಕ್ಷಾತೀತವಾಗಿ ಸಾವಿರಾರು ಮಂದಿ ಭಾಗಿಯಾಗಿ, ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ದೇಶ ಪ್ರೇಮವನ್ನು ಸಾರುತ್ತಿದ್ದಾರೆ, ತುಮಕೂರಿನಲ್ಲೂ ಅತ್ಯಂತ ಯಶಸ್ವಿಯಾಗಿ ತಿರಂಗ ಯಾತ್ರೆ ನಡೆದಿದ್ದು , ಭಾರತೀಯ ಸೇನೆಗೆ ಭಾವಪೂರ್ಣ ಅಭಿನಂದನೆಯನ್ನು ಸಲ್ಲಿಸಿದರು.