ತುಮಕೂರು : ತುಮಕೂರು ಜಿಲ್ಲೆ ಸ್ಮಾರ್ಟ್ ಸಿಟಿ ಅಂತ ಖ್ಯಾತಿಗಳಿಸಿದ್ದು, ನಗರ ಸಭೆಯಿಂದ ಮಹಾನಗರ ಪಾಲಿಕೆ ಅಂತ ಕೂಡ ಬಡ್ತಿ ಪಡೆದುಕೊಂಡಿದೆ. ಈ ಕಾರಣಕ್ಕೆ ನಗರದ ನಾಲ್ಕು ದಿಕ್ಕುಗಳನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಇಷ್ಟೆಲ್ಲ ಅಭಿವೃದ್ಧಿ ಹೊಂದುತ್ತಿದ್ದರೂ ಜಿಲ್ಲೆಯಲ್ಲಿರುವ ಆ ಒಂದು ಗ್ರಾಮದಲ್ಲಿ ಹಲವು ವರ್ಷಗಳಿಂದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತುಮಕೂರಿಗೆ ಕೂಗಳತೆಯ ದೂರದಲ್ಲಿರುವ ಕೋರಾ ಹೋಬಳಿಯ ಕೆಸ್ತೂರಿನ ಗ್ರಾಮದ ಪಕ್ಕದಲ್ಲಿರುವ ಜನರು ರಸ್ತೆ, ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಕೆಸ್ತೂರು ಗ್ರಾಮದಿಂದ ಕೇವಲ 2 ಕಿ.ಮೀಟರ್ ದೂರದಲ್ಲಿ ವಾಸಿಸುವ ಜನರಿಗೆ ಇಂದಿಗೂ ಕೂಡ ರಸ್ತೆ ಸರಿಯಿಲ್ಲದೆ, ಕುಡಿಯುವ ನೀರಿಲ್ಲದೆ ಜನರು ಕಂಗಾಲಾಗಿದ್ದಾರೆ. ಇಲ್ಲಿ ಹಲವು ವರ್ಷಗಳಿಂದ ರಸ್ತೆ ಇಲ್ಲದೆ ಮಣ್ಣಿನ ದಾರಿಯಲ್ಲಿಯೇ ವಯಸ್ಸಾದವರು, ಮಕ್ಕಳು, ಮಹಿಳೆಯರುವ ಓಡಾಡುತ್ತಿದ್ದಾರೆ. ನಮಗೆ ಓಡಾಡಲು ರಸ್ತೆ ಮಾಡಿಕೊಡಿ ಆದ್ರೆ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲವಂತೆ.
ಇನ್ನು ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತದೆ. ಇಂತಹ ರಸ್ತೆಯಲ್ಲಿ ವಾಹನ ಚಲಾಯಿಸುವುದಿರಲಿ ನಡೆದಾಡುವುದು ಕಷ್ಟ ಅಂತಾರೆ ಗ್ರಾಮಸ್ಥರು. ಇನ್ನು ವಿ. ಸೋಮಣ್ಣನವರು 2024ರಲ್ಲಿ ಕೋರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದರಂತೆ. ಅದರಂತೆ ಈ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ವಿ. ಸೋಮಣ್ಣ ಅಂದಿನ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಪ್ರಿಯಾಂಕ ಖರ್ಗೆಯವರಿಗೂ ಕೂಡ ಪತ್ರ ಬರೆದಿದ್ದಾರೆ. ಆದ್ರೆ ಇದುವರೆವಿಗೂ ತಮಗೆ ರಸ್ತೆ ವ್ಯವಸ್ಥೆ ಇಲ್ಲ ಅಂತಾ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡ್ರು.
ಜಿ.ಪರಮೇಶ್ವರ್ ಅವರು ಕೂಡ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಜನರಿಗೆ ರಸ್ತೆ ಮಾಡಿ ಕೊಡುವಂತೆ ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವ ಸೋಮಣ್ಣ, ಗೃಹ ಸಚಿವ ಪರಮೇಶ್ವರ್ ಅವರ ಸೂಚನೆಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ಗ್ರಾಮದ ಜನರಿಗೆ ರಸ್ತೆ ಮತ್ತು ಕುಡಿಯುವ ನೀರನ್ನು ಒದಗಿಸಿ ಕೊಡತ್ತಾರೆಯೇ ಕಾದು ನೋಡಬೇಕಿದೆ.