ತುಮಕೂರು : ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಈಗಾಗಲೇ ಅಮಾಯಕ ಜೀವಗಳು ಬಲಿಯಾಗಿವೆ. ಇಷ್ಟಾದರೂ ಕೂಡ ಬೆಸ್ಕಾಂ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾಡ್ತಾ ಇಲ್ಲ. ತುಮಕೂರು ನಗರದಲ್ಲಿ ಬೆಸ್ಕಾಂ ಇಲಾಖೆಗೆ ಸೇರಿರೋ ಎಲೆಕ್ಟ್ರಿಕ್ ಬಾಕ್ಸ್ಗಳು ಬಾಯ್ತೆರೆದಿದ್ದು, ಅಮಾಯಕ ಜೀವಗಳ ಬಲಿಗಾಗಿ ಕಾಯ್ತಿವೆ. ಮಳೆಗಾಲ ಬೇರೆ ಆರಂಭವಾಗಿದೆ, ಎಲೆಕ್ಟ್ರಿಕ್ ಬಾಕ್ಸ್ಗಳಿಗೆ ಮಳೆ ನೀರು ಸಿಡಿದು ಶಾರ್ಟ್ ಸರ್ಕ್ಯೂಟ್ ನಿಂದ ಅನೇಕ ಅನಾಹುತಗಳು ನಡೆಯುವುದು ಕಟ್ಟಿಟ್ಟ ಬುತ್ತಿಯಾಗಿದೆ.
ತುಮಕೂರಿನ ಹೊರಪೇಟೆಯ ಕರಿಬಸವ ಸ್ವಾಮೀಜಿ ಸರ್ಕಲ್ ಬಳಿ ಇರೋ ಬೆಸ್ಕಾಂ ಇಲಾಖೆ ಕಚೇರಿ ಮುಂದೆಯೇ ಎಲೆಕ್ಟ್ರಿಕ್ ಬಾಕ್ಸ್ ಬಾಯ್ತೆರೆದು ನಿಂತಿದ್ದು, ಅಮಾಯಕರ ಬಲಿಗಾಗಿ ಕಾಯ್ತಿವೆ. ನಿತ್ಯ ಇಲ್ಲಿ ನೂರಾರು ಮಂದಿ ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡ್ತಾ ಇದ್ದು, ಬಾಕ್ಸ್ ಮುಚ್ಚದೇ ಇರೋದರಿಂದ ಯಾವುದೇ ಕ್ಷಣದಲ್ಲಿ ಪ್ರಾಣಾಪಾಯ ಆಗುವ ಸಾಧ್ಯತೆ ಇದೆ. ಇನ್ನು ಈ ಸರ್ಕಲ್ನಲ್ಲಿ ಪ್ರತಿಬಾರಿಯೂ ಮಳೆ ಬಂದಾಗಲೂ ಚರಂಡಿಯಲ್ಲಿ ನೀರು ಸರಿಯಾಗಿ ಸಾಗದೇ ಕೆರೆಯಂತಾಗುವ ಪರಿಸ್ಥಿತಿ ಇದ್ದು, ವಿದ್ಯುತ್ ಬಾಕ್ಸ್ ಮಳೆ ನೀರಲ್ಲಿ ಮುಳುಗಲಿದ್ದು, ವಿದ್ಯುತ್ ಶಾಕ್ ಅಥವಾ ಇತರ ಅಪಾಯಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಬೆಸ್ಕಾಂ ಇಲಾಖೆ ಕಚೇರಿ ಮುಂದೆಯೇ ವಿದ್ಯುತ್ ಬಾಕ್ಸ್ಗಳು ಬಾಯ್ತೆರೆದಿದ್ದು, ಬೆಸ್ಕಾಂ ಇಲಾಖೆ ಕಂಡಿದ್ದು ಕುರುಡರಂತೆ ವರ್ತಿಸ್ತಿದ್ಯಾ ಎಂಬ ಅನುಮಾನ ಕಾಡ್ತಿದೆ. ಅಲ್ಲದೇ ಬೆಸ್ಕಾಂ ಕಚೇರಿ ಮುಂದೆಯೇ ಇಂತಹ ಅವ್ಯವಸ್ಥೆಯು ಕಂಡುಬಂದರೆ, ನಗರಾದ್ಯಂತ ಏನು ಸ್ಥಿತಿಯಿರಬಹುದು ಎಂಬ ಭಯವೂ ಮೂಡುತ್ತಿದೆ.
ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ.