ತುಮಕೂರು : ಬೆಸ್ಕಾಂ ಅಧಿಕಾರಿಗಳ ದರ್ಪ ಹೇಗಿರುತ್ತೆ ಅಂದರೆ ಒಂದು ತಿಂಗಳ ಲೈಟ್ ಬಿಲ್ ಕಟ್ಟಿಲ್ಲ ಅಂದ್ರೆ ಸ್ಥಳದಲ್ಲೇ ಕರೆಂಟ್ ಕಟ್ ಮಾಡುತ್ತಾರೆ. ಬಡವರು ಸಾರ್ ಮುಂದಿನ ತಿಂಗಳು ಸೇರಿಸಿ ಕಟ್ಟುತ್ತೇನೆ ಅಂತ ಬೇಡಿಕೊಂಡರು ಬಿಡೋದಿಲ್ಲ. ಇಲ್ಲಾ ರೀ ಆಗೋಲ್ಲ ನಮ್ಮ ಅಧಿಕಾರಿಗಳಿಂದ ಆರ್ಡರ್ ಆಗಿದೆ ಅಂತ ಹೇಳ್ತಾರೆ. ಆದರೆ ತುಮಕೂರು ಐಬಿಗೆ ಬರೋಬ್ಬರಿ 3 ಲಕ್ಷ ಬಿಲ್ ಬಂದಿದೆ. ಆದರೆ ಅಧಿಕಾರಿಗಳು ಮಾತ್ರ ಕರೆಂಟ್ ತೆಗೆದಿಲ್ಲ. ಅದರ ಬಗ್ಗೆ ಗಪ್ಚಿಪ್ ಆಗಿದ್ದಾರೆ. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವೇ ಅಂತ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಒಂದು ದಿನ ಕರೆಂಟ್ ಬಿಲ್ ಕಟ್ಟೋದು ಮಿಸ್ ಆದ್ರೆ, ಇವತ್ತು ಕಟ್ಲೇಬೇಕು ಅಂತ ಹಠ ಮಾಡೋ ಬೆಸ್ಕಾಂ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಬಂದಿದ್ದರೂ ಕೂಡ ಐಬಿಯಲ್ಲಿ ಕರೆಂಟ್ ತೆಗೆದಿಲ್ಲ. ಹೋಗಿ ಬಿಲ್ ಕೇಳಿಲ್ಲ. ತುಮಕೂರು ನಗರದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರಕ್ಕೆ (IB) ಸತತ 10 ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸದೆ ಬರೋಬ್ಬರಿ ಮೂರು ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿದ್ದಾರೆ. ಬೆಸ್ಕಾಂ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಆರೋಪಗಳು ಕೇಳಿಬಂದಿವೆ. ಈ ಅವ್ಯವಸ್ಥೆಗೆ ಕಾರಣವಾಗಿರುವುದು ಇಲ್ಲಿನ ಸಾರ್ವಜನಿಕ ನಿರ್ಮಾಣ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯವಲ್ಲದೆ ಬೇರೆ ಏನೂ ಅಲ್ಲ. ಇತ್ತ ಬೆಸ್ಕಾಂ ಇಲಾಖೆಯೂ ಬಿಲ್ ಕಲೆಕ್ಟ್ ಮಾಡೋದಕ್ಕೆ ಹಿಂಜರಿಯುತ್ತಿರುವುದು ಯಾಕೆ ಅನ್ನೋ ಪ್ರಶ್ನೆ ಮೂಡ್ತಿದೆ.
ಇತ್ತ ಹಣ ಪಾವತಿಸದಿದ್ದರೆ ಬಡ ಜನರ ಮನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆಸ್ಕಾಂ ಅಧಿಕಾರಿಗಳು, ಸರ್ಕಾರದ ಆಸ್ತಿ ಆದಾಗ ಮಾತ್ರ ತೀವ್ರ ನಿರ್ಲಕ್ಷ್ಯ ತೋರುತ್ತಿರುವುದು ಬೆಸ್ಕಾಂ ಇಲಾಖೆಯ ಎರಡೆರಡು ಮುಖದ ಬಂಡವಾಳವನ್ನು ತೋರಿಸುತ್ತದೆ. ಹಣ ಬಾಕಿ ಇದ್ದರೂ ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡದಿರುವುದು ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಿಯ ಎಂಬ ಅನುಮಾನ ಮೂಡಿದೆ.
ಇನ್ನು ಇದರ ಬಗ್ಗೆ ನಗರ ಶಾಸಕ ಜ್ಯೋತಿ ಗಣೇಶ್ ಅವರನ್ನು ಪ್ರಶ್ನೆ ಮಾಡಿದರೆ ಇದರ ಬಗ್ಗೆ ನನಗೆ ಗೊತ್ತಿಲ್ಲ, ಇಲಾಖೆ ಇಷ್ಟೊಂದು ಬರ್ಗೆಟ್ಟಿಲ್ಲ ಅಂದುಕೊಂಡಿದ್ದೇನೆ. ಇದರ ಬಗ್ಗೆ ನಾನು ವಿಚಾರಿಸುತ್ತೇನೆ ಅಂತ ಜಾರಿಕೊಂಡರು.
ಒಟ್ಟಿನಲ್ಲಿ, ಜನ ಸಾಮಾನ್ಯರು ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದರೆ ಕ್ರಮಕೈಗೊಳ್ಳೋ ಇಲಾಖೆ, ಇದೀಗ ಸರ್ಕಾರಿ ಪ್ರವಾಸಿ ಮಂದಿರ ಲಕ್ಷ ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಲ್ ವಸೂಲಿ ಮಾಡೋಕೆ ಬೆಸ್ಕಾಂ ಅಧಿಕಾರಿಗಳು ಹೆದರುತ್ತಿದ್ದಾರೋ. ಇಲ್ಲವೇ ಯಾರಾದರೂ ಪ್ರಭಾವಿ ವ್ಯಕ್ತಿಯ ಭಯವಿದೆಯೇ ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಇತ್ತ ಕರೆಂಟ್ ಬಿಲ್ ಕೇಳೋದಿರಲಿ ಅತ್ತ ತಲೆ ಹಾಕಿ ಕೂಡ ನೋಡ್ತಿಲ್ಲ. ನ್ಯಾಯ ಎಲ್ಲರಿಗೂ ಒಂದೇ ಅನ್ನೋದಾದರೆ ಐಬಿ ಮತ್ತು ಪಿಡಬ್ಲ್ಯೂಡಿ ಇಲಾಖೆಯ ವಿರುದ್ಧ ಬೆಸ್ಕಾಂ ಕ್ರಮ ತೆಗೆದುಕೊಳ್ಳುತ್ತಾ, ಇಲ್ವಾ ಅನ್ನೋದು ಕಾದು ನೋಡಬೇಕಿದೆ