TUMAKURU : ರಾಜಕಾಲುವೆಗಳು ಹಿಂದಿನ ದಿನಗಳಲ್ಲಿ ಆಯಾ ಗ್ರಾಮ, ಪ್ರಾಂತ್ಯಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೀರನ್ನು ಒದಗಿಸಲು ರಾಜರು ಕಟ್ಟಿಸಿದರು. ನಾಗರೀಕತೆ ಬೆಳೆದಂತೆ ಅಭಿವೃದ್ಧಿಯ ಹೆಸರಲ್ಲಿ ರಾಜಕಾಲುವೆಗಳು ಅನೇಕ ಕಾರಣಗಳಿಗೆ ಒತ್ತುವರಿ ಆಗತ್ತು ಬಂದಿವೆ. ಇಂದಿಗೂ ಕೂಡ ರಾಜ್ಯಾದ್ಯಂತ ಅದೆಷ್ಟೋ ರಾಜಕಾಲುಗಳು ಒತ್ತುವರಿ ಆಗಿ ಆ ಜಾಗದಲ್ಲಿ ಬಿಲ್ಡಿಂಗ್, ಮಹಲ್ಗಳು ತಲೆ ಎತ್ತಿವೆ. ಅದರಂತೆ ತುಮಕೂರಿನಲ್ಲಿಯೂ ಕೂಡ ರಾಜಕಾಲುವೆಗಳು ಒತ್ತುವರಿಯಾಗಿರುವುದು ಸತ್ಯ ಅನ್ನೋ ಮಾತುಗಳು ಕೇಳಿಬರ್ತಿವೆ. ಇತ್ತ ಶಾಂತಿನಗರದಲ್ಲಿರುವ ರಾಜಕಾರಲುವೆಯಿಂದಾಗಿ ಅಲ್ಲಿ ವಾಸಿಸುವ ಜನರು ಹೈರಾಣಾಗಿದ್ದಾರೆ.
ತುಮಕೂರಿನ 18ನೇ ವಾರ್ಡ್ ಶಾಂತಿನಗರದ ನಿವಾಸಿಗಳು ಕಳೆದ ಮೂರು ನಾಲ್ಕು ವರ್ಷಗಳಿಂದ ರಾಜಕಾಲುವೆಯ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾಲುವೆಯಲ್ಲಿ ಕೊಳಚೆ ನೀರು ಸರಿಯಾಗಿ ಹರಿಯದೆ, ಅಲ್ಲಿಯೇ ನಿಂತು ಗಬ್ಬೆದ್ದು ನಾರುತ್ತಿದೆ. ಈ ರಾಜಕಾಲುವೆಯಲ್ಲಿ ತೇಲಿ ಬರುವಂತ ತ್ಯಾಜ್ಯದಿಂದಾಗಿ ಶಾಂತಿನಗರ ಜನರು ವಾಸನೆಯನ್ನು ಕುಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಈ ರಾಜಕಾಲುವೆಯ ಒಂದು ಬದಿಯಲ್ಲಿ ಮನೆಗಳು ಇದ್ದರೆ ಮತ್ತೊಂದು ಬದಿಯಲ್ಲಿ ಪಾರ್ಕ್ ಇದೆ. ಮನೆಯಲ್ಲಿ ವಾಸಿಸುವ ಜನರು ಆ ಗಬ್ಬನ್ನು ಕುಡಿದುಕೊಂಡು ಬದುಕುತ್ತಿದ್ದರೇ. ಇತ್ತ ಪಾರ್ಕ್ನಲ್ಲಿ ಸ್ವಚ್ಛ ಗಾಳಿ ಸಿಗುತ್ತದೆ ಅಂತ ಬರುವ ಹಿರಿಯರು, ಮಕ್ಕಳು, ಮಹಿಳೆಯರು ಕೂಡ ರಾಜಕಾಲುವೆ ವಾಸನೆಯನ್ನು ಕುಡಿಯುವಂತಾಗಿದೆ. ಹೀಗಾಗಿ ಪಾರ್ಕ್ಗಳತ್ತ ಬರುವ ಜನಸಂಖ್ಯೆ ಕೂಡ ಇಲ್ಲಿ ಕಡಿಮೆಯಾಗಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿದ್ರು ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದು ಸ್ಮಾರ್ಟ್ ಸಿಟಿ ಅಂತ ಹೆಸರಿಗೆ ಅಷ್ಟೇ. ಬದಲಿಗೆ "ಕೊಳಚೆ ಸಿಟಿ" ಆಗಿ ಬದಲಾಗುತ್ತಿದೆ. ಮಕ್ಕಳಿಂದ ಮುದುಕರ ತನಕ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿವೆ. ಶಾಲೆ, ಕಚೇರಿ ಹೋಗುವುದು ಕೂಡ ಕಷ್ಟಕರವಾಗಿದೆ. ರಾಜಕಾಲುವೆ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಮಾಡುವಲ್ಲಿ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮತ್ತೊಬ್ಬ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಕಾಪಾಡುವ ಜವಾಬ್ದಾರಿ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ. ಆದರೆ ಒತ್ತುವರಿಯನ್ನು ತೆರವುಗೊಳಿಸುವುದಿರಲಿ, ಇರುವ ರಾಜಕಾಲುವೆಗಳನ್ನು ಉಳಿಸಬೇಕು. ಇಲ್ಲವೆ ಗಬ್ಬೆದ್ದು ನಾರುತ್ತಿರುವ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಆ ಮೂಲಕ ಅಲ್ಲಿ ವಾಸಿಸುವ ಜನರ ಆರೋಗ್ಯ ಕಾಪಾಡಬೇಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶಾಂತಿನಗರದ ಜನರ ಜೀವ ಕಾಪಾಡಬೇಕಿದೆ.