Tumakuru : ಆರೋಗ್ಯ ಇಲಾಖೆ ಯಡವಟ್ಟು? ಶಾಲಾ ಮಕ್ಕಳ ಜೀವಕ್ಕಿಲ್ಲ ಬೆಲೆ

TUMAKURU : ನಗರವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಆಯಾ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಯ ಮೇಲೆ ಇರುತ್ತೆ. ಈ ಕಾರಣಕ್ಕೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ನಗರದ ಸ್ವಚ್ಛತೆಯು ಎಷ್ಟು ಮುಖ್ಯವೋ ಶಾಲಾ-ಕಾಲೇಜು ಮುತ್ತಮುತ್ತಲಿನ ಚರಂಡಿ, ರಸ್ತೆಯನ್ನು ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ. ಇತ್ತೀಚೆಗೆ ತಾನೇ ಮತ್ತೆ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ನಗರದ ಸ್ವಚ್ಚತೆಗೆ ಹೆಚ್ಚಿನ ಗಮನನೀಡಬೇಕು.  ಆದರೆ ಪಾಲಿಕೆಯ ಅಧಿಕಾರಿಗಳು ಯಾಕೋ ಸ್ವಚ್ಛತೆಯತ್ತ ಗಮನಹರಿಸೋದನ್ನೇ ಮರೆತು ಹೋಗಿದ್ದಾರೆ ಅನ್ನಿಸುತ್ತಿದೆ. ಈ ಕಾರಣಕ್ಕೆ ಇಂದು ತುಮಕೂರಿನ ಜೈಪುರದಲ್ಲಿರುವ ಮಹಾವೀರ ಇಂಗ್ಲೀಷ್‌ ಸ್ಕೂಲ್‌ ಶಾಲಾ ಆವರಣವು ಸೊಳ್ಳೆಗಳ ಆವಾಸಸ್ಥಾನವಾಗಿದೆ.

ಜೈಪುರದ ಹೌಸಿಂಗ್‌ ಬೋರ್ಡ್‌ ನಲ್ಲಿರುವ ಮಹಾವೀರ ಇಂಗ್ಲೀಷ್‌ ಶಾಲೆಗೆ ಸುತ್ತಮುತ್ತಲಿನ ಬಡಾವಣೆಯ ನೂರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಬ್ಯಾಸಕ್ಕಾಗಿ ಬರುತ್ತಾರೆ. ಶಾಲೆಯ ಹಿಂಭಾಗದಲ್ಲಿರುವ ದೊಡ್ಡ ಚರಂಡಿಯು ಕಸದ ರಾಶಿಯಿಂದ ಕಟ್ಟಿಕೊಂಡಿದ್ದು, ಗಬ್ಬೆದ್ದು ನಾರುತ್ತಿದೆ. ಸ್ವಚ್ಛತೆಯ ಬಗ್ಗೆ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ರು ಕ್ಯಾರೆ ಅನ್ನುತ್ತಿಲ್ಲವಂತೆ.  ಇಲ್ಲಿನ ಅವ್ಯವಸ್ಥೆಯಿಂದಾಗಿ ಮಕ್ಕಳಲ್ಲಿ ರೋಗ-ರುಜನೆಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ಶುರುವಾಗಿದೆ.

ಇನ್ನು ಈ ಶಾಲೆಯನ್ನು ತುಮಕೂರು ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡಸಿ ʼಈ ಶಾಲೆ ಆವರಣವು ಈಡಿಸ್‌ ಸೊಳ್ಳೆ ರಹಿತದಿಂದ ಮುಕ್ತವಾಗಿದೆʼ ಎಂದು ಸರ್ಟಿಫಿಕೇಟ್‌ ಕೂಡ ಕೊಟ್ಟಿದ್ದಾರೆ. ಆದರೆ ಇಲ್ಲಿ ಮೂಡುವ ಪ್ರಶ್ನೆ ಏನಂದರೆ ಶಾಲೆಯ ಹಿಂಭಾಗದಲ್ಲಿಯೇ ಚರಂಡಿ ಕಟ್ಟಿಕೊಂಡು ಗಬ್ಬೆದ್ದು ನಾರುತ್ತಿದೆ. ಸ್ವಚ್ಛತೆ ಅನ್ನೋದು ಇಲ್ಲಿ ಕಾಣ್ತಾನೇ ಇಲ್ಲ. ಯಾವ ಆಧಾರದ ಮೇಲೆ ಆರೋಗ್ಯ ಇಲಾಖೆ ಈ ರೀತಿಯಾಗಿ ದೃಢೀಕರಿಸಿತು ಅಂತ ಅಧಿಕಾರಿಗಳೇ ಉತ್ತರ ಕೊಡಬೇಕಿದೆ.

ಶಾಲೆಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕರು ಹಲವಾರು  ಬಾರೀ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೂ ಕೂಡ ಯಾರು ಬಂದು ಈ ಚರಂಡಿಯನ್ನು ಸ್ವಚ್ಛ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಯತ್ತ ಗಮನಹರಿಸಿ, ತುಂಬಿ ತುಳುಕುತ್ತಿರುವ ಚರಂಡಿಯನ್ನು ಸ್ವಚ್ಚಗೊಳಿಸಿ, ಈ ಚರಂಡಿಯ ದುರ್ವಾಸನೆಯಿಂದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಮುಕ್ತಿ ನೀಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews