SHIVAMOGGA: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗನ ಮದುವೆಯ ಆರತಕ್ಷತೆ ಸಮಾರಂಭ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಉಪಸ್ಥಿತರಿದ್ದು, ಎಲ್ಲರ ಗಮನ ಸೆಳೆದರು.
ಈಶ್ವರಪ್ಪ ಅವರನ್ನು ನೋಡಿ, ಯಡಿಯೂರಪ್ಪ ಅವರೇ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಎರಡು ನಾಯಕರ ನಡುವಿನ ಬಿಸಿಯಾದ ರಾಜಕೀಯ ತಾಳ್ಮೆಗೆ ತಾತ್ಕಾಲಿಕ ಶಾಂತಿ ಕಂಡಿತು. ನಂತರ ಯಡಿಯೂರಪ್ಪ ಅವರು ಶಾಲು ಹೊದಿಸಿ ಈಶ್ವರಪ್ಪ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಒಂದು ವರ್ಷದ ರಾಜಕೀಯ ಜಿದ್ದಾಜಿದ್ದಿಯ ಬಳಿಕ ಈ ದಿಗ್ಗಜ ನಾಯಕರು ಪರಸ್ಪರ ಕೈ ಕುಲುಕಿದ್ದಾರೆ. ಯಡಿಯೂರಪ್ಪನವರು ಆಲಿಂಗನದ ಮೂಲಕ ಈಶ್ವರಪ್ಪನವರ ಮೇಲಿರುವ ಮುನಿಸು ಮರೆತು ಮುಗುಳ್ನಗೆ ಬೀರಿದ್ದಾರೆ. ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪನವರು ಕೆಲ ಕಾಲ ಕೈ, ಕೈ ಹಿಡಿದುಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
ಸಂಸದ ಬಿ. ವೈ. ರಾಘವೇಂದ್ರ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖ ರಾಜಕೀಯ ಮುಖಂಡರು, ಬಿಜೆಪಿ ನಾಯಕರೂ ಹಾಜರಾಗಿದ್ದರು. ಈಶ್ವರಪ್ಪ–ಯಡಿಯೂರಪ್ಪ ಆತ್ಮೀಯತೆ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.