TUMAKURU : ತುಮಕೂರು ನಗರ ಸ್ಚಚ್ಛನಗರ, ಸ್ಮಾರ್ಟ್ ಸಿಟಿ, ವೇಗವಾಗಿ ಬೆಳೆಯುತ್ತಿರುವ ನಗರ ಅಂತ ಕರೆತೀವಿ. ಅದ್ಯಾಕೋ ಇಂತಹ ಹೆಸರು ಪಡೆದಿರುವ ನಗರದಲ್ಲಿ ಸಮಸ್ಯೆಗಳು ಮಾತ್ರ ದಿನೇದಿನೇ ಹೆಚ್ಚಾಗುತ್ತಿವೆ. ಪ್ರತಿನಿತ್ಯ ಒಂದಿಲ್ಲೊಂದು ತೊಂದರೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲವು ಏರಿಯಾಗಳಲ್ಲಿ ಇಂದಿಗೂ ಸರಿಯಾದ ಮೂಲಭೂತ ಸೌಕರ್ಯವಿರದೇ ಜನ ಪರದಾಡುತ್ತಿದ್ದಾರೆ. ತುಮಕೂರಿನ ಜಯಪುರದ 9 ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಜಯಪುರದ ಒಂಬತ್ತನೇ ವಾರ್ಡ್ ನ 18ನೇ ಕ್ರಾಸ್ ನಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯಲು ಮತ್ತು ದಿನ ನಿತ್ಯದ ಬಳಕೆ ಮಾಡಲು ನೀರನ್ನು ಟ್ಯಾಂಕರ್ ಮೂಲಕ ದುಡ್ಡು ಕೊಟ್ಟು ತರಿಸಿಕೊಳ್ತಿದ್ದಾರೆ. ಬರುತ್ತಿರುವ ನೀರು ವಾಸನೆಯಿಂದ ಕೂಡಿದ್ದು, ಯುಜಿಡಿ ನೀರು ಮಿಶ್ರಣವಾಗಿದೆ ಎನ್ನುತ್ತಿದ್ದಾರೆ ಜನ. ಇದೇನು ಬೇಸಿಗೆ ಕಾಲವಲ್ಲ, ಆದರೂ ಕೂಡ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರಿಗೆ ಕುಡಿಯಲು ನೀರು ಸಿಗ್ತಿಲ್ಲ ಅಂತ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಸ್ಥಳೀಯರೊಬ್ಬರು ಮಾತನಾಡಿ, ಹಲವಾರು ದಿನಗಳಿಂದ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದೇವೆ. ಆದರೂ ಕೂಡ ಯಾವುದೇ ಅಧಿಕಾರಿ ಈ ಸಮಸ್ಯೆಯ ಬಗ್ಗೆ ಗಮನಹರಿಸಿ, ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಷ್ಟು ದಿನ ವಾರಕ್ಕೊಮ್ಮೆ ನೀರು ಬಿಟ್ಟು ನಮ್ಮನ್ನು ಸತಾಯಿಸುತ್ತಿದ್ದರು. ಆದರೆ, ಇದೀಗ ಬರುವ ನೀರಿನಲ್ಲಿ ಯುಜಿಡಿ ಮಿಶ್ರಿತ ನೀರು ಬರುತ್ತಿದೆ. ಈ ನೀರನ್ನು ಕುಡಿಯಲು ಆಗ್ತಿಲ್ಲ. ಬೇರೆ ಉಪಯೋಗಕ್ಕೆ ಬಳಸಲು ಆಗ್ತಿಲ್ಲ. ಇಂತಹ ಸ್ಥಿತಿ ಬಂದರೆ ನಾವು ಹೇಗೆ ಬದುಕೋದು, ಆದಷ್ಟು ಬೇಗ ನಮಗೆ ಒಳ್ಳೆ ನೀರು ಬಿಡಿ ಎಂದು ವೃದ್ಧೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಅದೇನೇ ಇರಲಿ ಮನುಷ್ಯನಿಗೆ ಮೂಲಭೂತ ಸೌಕರ್ಯಗಳಲ್ಲಿ ನೀರು ಅತೀ ಮುಖ್ಯ. ಇಂತಹ ಕುಡಿಯುವ ನೀರನ್ನು ಕೊಡದಿರುವ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಆ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಅಧಿಕಾರಿಗಳು ಜಯಪುರ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡ್ತಾರಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.