ತಿಪಟೂರು : ಸೈನಿಕರು ರಾಷ್ಟ್ರ ರಕ್ಷಣೆಗಾಗಿ ತೋರಿದ ಧೈರ್ಯ, ಶೌರ್ಯದಿಂದ "ಆಪರೇಷನ್ ಸಿಂಧೂರ ” ಯಶಸ್ವಿಯಾಯಿತು. ಈ ಹಿನ್ನಲೆ ತಿಪಟೂರಿನ ನಾಗರೀಕರಿಂದ ಮೇ 28ರಂದು ಬೃಹತ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಿಪಟೂರು ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ನಾಗರೀಕ ಸಂಘಟನೆಗಳ ಪ್ರಾಥಮಿಕ ತಿರಂಗಯಾತ್ರೆ ರೂಪರೇಷೆಗಳ ಬಗ್ಗೆ ಚರ್ಚೆ ನಡೆದಿದೆ. ಭಯೋತ್ಪಾದನಾ ರಾಷ್ಟ್ರ ಪಾಕಿಸ್ಥಾನಕ್ಕೆ ನುಗ್ಗಿ ಹೊಡೆದು, ಉಗ್ರರ ಅಡಗು ತಾಣಗಳನ್ನು ನಾಶಮಾಡಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆಂಬಲಿಸಿ ತಿಪಟೂರಿನಲ್ಲಿ ಬೃಹತ್ ತಿರಂಗ ಯಾತ್ರೆ ನಡೆಸಲಾಗುವುದು. ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಮುಖಂಡ ಡಾ.ಶ್ರೀಧರ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್, ನಗರಾಧ್ಯಕ್ಷ ಜಗದೀಶ್ ಹಿಂದೂಪರ ಸಂಘಟನೆಗಳ ಮುಖಂಡರಾದ ಹಳ್ಳಿಕಾರ್ ವಿನಯ್, ಮಡೆನೂರು ಬಾಳೆಕಾಯಿ ನಟರಾಜ್, ಗಾಡಿ ಮಂಜುನಾಥ್ ರಂಗಾಪುರ ಮತ್ತಿತರರು ಹಾಜರಿದ್ದರು.