ವಿರಾಜಪೇಟೆ : ಇಂದಿನಿಂದ ಕರ್ನಾಟಕ, ಕೇರಳ ಸೇರಿದಂತೆ ತಮಿಳುನಾಡು ರಾಜ್ಯಗಳಲ್ಲಿ ಪ್ರಾರಂಭವಾಗಿರುವ ರಾಷ್ಟ್ರಮಟ್ಟದ ಆನೆಗಳ ಗಣತಿ ಕಾರ್ಯವು ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ವಿರಾಜಪೇಟೆ ಹಾಗೂ ತಿತಿಮತಿ ವಲಯಗಳ ವ್ಯಾಪ್ತಿಯಲ್ಲೂ ಆನೆಗಳ ಸಂಖ್ಯಾ ಗಣನೆ ಪ್ರಕ್ರಿಯೆ ಆರಂಭಗೊಂಡಿದೆ.
ಈ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ಹೆಚ್. ಜಗನ್ನಾಥ್ ಹಾಗೂ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅಧಿಕಾರಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡಗಳು ಸಕ್ರೀಯವಾಗಿ ಭಾಗಿಯಾಗಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಗಣತಿಯು ರಾಜ್ಯಗಳ ನಡುವಿನ ಆನೆ ಕಾರಿಡಾರ್ಗಳ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಏಕಕಾಲದಲ್ಲಿ ನಡೆಸಲಾಗುತ್ತಿದೆ, ಇದರಿಂದ ಆನೆಗಳ ಚಲನೆಯಿಂದ ಉಂಟಾಗುವ ಗೊಂದಲವನ್ನು ತಪ್ಪಿಸಬಹುದು. ಕರ್ನಾಟಕದಲ್ಲಿ ಪ್ರತಿ ವರ್ಷ ಆನೆ ಗಣತಿಯನ್ನು ನಡೆಸಲಾಗುತ್ತಿದ್ದು, ಈ ಬಾರಿ 10 ಅರಣ್ಯ ವಿಭಾಗಗಳಲ್ಲಿ ಈ ಕಾರ್ಯ ನಡೆಯಲಿದೆ.