ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ತಾಲೂಕಿನ ಅದೇಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುತ್ತಿದ್ದಾರೆ. ಅದ್ವಾನ ಎದ್ದಿರುವ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದಾರೆ. ಇತ್ತ ಸಾಲಕಟ್ಟೆ ಕ್ರಾಸ್ ನಿಂದ ಬೆಳ್ಳಾರ ನಡುವೆ ಬಡಕೆಗುಡ್ಲು ಹತ್ತಿರ ಇರುವ ಬ್ರಿಡ್ಜ್ ಕಿಲ್ಲರ್ ಬ್ರಿಡ್ಜ್ ಆಗಿ ಮಾರ್ಪಾಡಾಗುತ್ತಿದೆ. ಈ ಬ್ರಿಡ್ಜ್ ಮೇಲೆ ನೀವು ಅಪ್ಪಿ-ತಪ್ಪಿ ಯಾಮಾರಿದ್ರೆ ಸಾವು ಗ್ಯಾರಂಟಿ ಅನ್ನೋ ಆಗಿದೆ. ಇಂತಹ ಅವ್ಯವಸ್ಥೆಯ ಬ್ರಿಡ್ಜ್ನ್ನು ಸರಿಪಡಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡ್ರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ. ಈ ಕಾರಣಕ್ಕೆ ಆ ಗ್ರಾಮದ ಯುವಕರೇ ಮುಂದೆ ನಿಂತು ಆ ಬ್ರಿಡ್ಜ್ ಮೇಲಿದ್ದ ಗುಂಡಿಯನ್ನು ಮುಚ್ಚುತ್ತಿದ್ದಾರೆ.
ಇತ್ತೀಚೆಗೆ ತಾನೇ ಕಾರ್ಯನಿಮಿತ್ತ ತುರುವೇಕೆರೆಯಿಂದ ದಸೂಡಿ ಗ್ರಾಮಕ್ಕೆ ಬಂದಿದ್ದ ಬೈಕ್ ಸವಾರ ಗೋವಿಂದರಾಜು ದಸೂಡಿಯಿಂದ ವಾಪಸ್ ತೆರಳುವಾಗ ಇದೇ ಸೇತುವೆಯ ಮೇಲೆ ಅಪಘಾತವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಇಂತಹ ಅಪಾಯಕಾರಿ ಸೇತುವೆ ಕಣ್ಮುಂದೆ ಇದ್ದರೂ ಅಧಿಕಾರಿಗಳು ಜಾಣಕುರುಡುತನ ತೋರಿಸುತ್ತಿದ್ದಾರೆ ಅಂತ ಬಡಕೆಗುಡ್ಲು ಗ್ರಾಮದ ಯುವಕರು ಸ್ವತಃ ಗುಂಡಿಯನ್ನು ಮುಚ್ಚಲು ಮುಂದಾದ್ರು. ಸೇತುವೆಗೆ ತಾತ್ಕಾಲಿಕವಾಗಿ ಕಾಂಕ್ರೀಟ್ ಹಾಕಿ ಗುಂಡಿಗಳನ್ನು ಮುಚ್ಚಿದ್ದಾರೆ. ಯುವಕರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಈ ಸೇತುವೆಯು ತುಂಬಾ ಹಳೆಯದಾಗಿದ್ದು, ಸೇತುವೆ ನಡುವೆ ದೊಡ್ಡ ಮಟ್ಟದ ಬಿರುಕು ಬಿಟ್ಟುಕೊಂಡಿವೆ. ಸಾವು ನೋವು ತರುವುದರ ಜೊತೆಯಲ್ಲಿ ಯಾವಾಗ ಬೇಕಾದ್ರು ಕುಸಿಯಬಹುದು. ಇತ್ತ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸುತ್ತಲಿನ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಾಹನ ಸವಾರರ ಪ್ರಾಣವನ್ನು ಉಳಿಸಬೇಕಿದೆ.