ಶಿರಾ : ರಾಜ್ಯದ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯಕ್ಕೆ ಪ್ರವಾಹದ ಮಟ್ಟಿನ ಒಳಹರಿವು ಆಗುತ್ತಿದೆ. ಸಕಲೇಶಪುರ ಮತ್ತು ಮೂಡಿಗೆರೆ ಭಾಗಗಳಲ್ಲಿ ಭಾರಿ ಮಳೆಯಿಂದ ಜಲಾಶಯದ ನೀರಿನ ಮಟ್ಟದಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದ್ದು, ಶಿರಾ ಸೇರಿದಂತೆ ತುಮಕೂರು ಜಿಲ್ಲೆಯ ಹಲವಾರು ಭಾಗಗಳಿಗೆ ನೀರು ಹರಿಬಿಡುವ ಪ್ರಕ್ರಿಯೆ ಆರಂಭವಾಗಿದೆ.
ಪ್ರಸ್ತುತ 9404 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಇದರ ಪೈಕಿ ನದಿಗೆ 300 ಕ್ಯೂಸೆಕ್, ಎಡದಂಡೆ ನಾಲೆಗೆ 2900 ಕ್ಯೂಸೆಕ್, ಬಲದಂಡೆ ನಾಲೆಗೆ 25 ಕ್ಯೂಸೆಕ್ ನೀರನ್ನು ಸೇರಿಸಿ ಒಟ್ಟು 3225 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ.
ಜಲಾಶಯದ ನೀರಿನ ಮಟ್ಟ ಈಗ 2899 ಅಡಿಗಳಷ್ಟಾಗಿದ್ದು, ಇದು ಕಳೆದ ವರ್ಷದ ಈ ಅವಧಿಯ 2880 ಅಡಿಗಳನ್ನು ಮೀರಿದೆ. ಈಗಿನ ಒಟ್ಟು ನೀರಿನ ಸಂಗ್ರಹ 19.063 ಟಿಎಂಸಿ ಆಗಿದ್ದು, ಇದನ್ನು ಮನಗಂಡು 2025–26ನೇ ಸಾಲಿನ ನೀರು ಬಿಡುಗಡೆ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ.
ಜಿಲ್ಲೆಯ ಶಿರಾ, ಕಳ್ಳಂಬೆಳ್ಳ, ಮದಲೂರು ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಗುಬ್ಬಿ ತಾಲ್ಲೂಕಿನ ಚೇಳೂರು ಬಳಿಯ ಪಟ್ರಾವತನಹಳ್ಳಿ ಎಸ್ಕೇಪ್ ಗೇಟ್ ಮುಖಾಂತರ ಹೇಮಾವತಿಯ ನೀರನ್ನು ಹರಿಸಲಾಗುತ್ತಿದೆ. ಇದು ಸತತ 22ನೇ ವರ್ಷ ಶಿರಾ ಭಾಗದ ಜನರಿಗೆ ನೀರಿನ ಕೊಡುಗೆಯಾದಂತಾಗಿದೆ.
ಈ ನಿಟ್ಟಿನಲ್ಲಿ ಶಿರಾ ನಗರದ ಹತ್ತಿರದ ದೊಡ್ಡ ಕೆರೆ ಹಾಗೂ ಇತರ ಜಲಾಶಯಗಳ ಪರಿಸರವನ್ನು ಸ್ವಚ್ಛಗೊಳಿಸಿ, ಶುದ್ಧ ನೀರು ಪೂರೈಕೆ ಮಾಡಲು ನಗರ ಆಡಳಿತ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರ ಒತ್ತಾಸೆ ಕೇಳಿಬರುತ್ತಿದೆ. ನೀರಿನ ಶುದ್ಧೀಕರಣ ಹಾಗೂ ವಿತರಣೆಯಲ್ಲಿ ಶಿಸ್ತಿನ ವ್ಯವಸ್ಥೆ ಜಾರಿಗೆ ತರಬೇಕೆಂದು ಜನಸಾಮಾನ್ಯರು ಆಗ್ರಹಿಸುತ್ತಿದ್ದಾರೆ.