ತುಮಕೂರು : ಈ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಬೇಕು ಅಂತಲೇ ಹೀಗೆ ಮಾಡ್ತಾರೋ ಏನೋ ಗೊತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡೋದೇ ಅವ್ರ ಉದ್ದೇಶವೋ ಏನೋ ಅದು ಕೂಡ ಅರ್ಥ ಆಗ್ತಿಲ್ಲ. ಯಾಕಂದ್ರೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿ ವೇಳೆ ಟೌನ್ ಹಾಲ್ ಸರ್ಕಲ್ ನಿಂದ ಮಹಾನಗರ ಪಾಲಿಕೆಗೆ ಸಂಪರ್ಕ ಕಲ್ಪಿಸುವ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು. ಆದರೆ ಇದೀಗ ಈ ಕಾಮಗಾರಿ ಕೆಲಸ ಮುಗಿದು, ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಗೊಂಡರೂ ಕೂಡ ಮೇನ್ ಗೇಟ್ ಮಾತ್ರ ಓಪನ್ ಮಾಡ್ತಿಲ್ಲ. ಹೀಗಾಗಿ ದಿನನಿತ್ಯ ಮಹಾನಗರ ಪಾಲಿಕೆಗೆ ತಮ್ಮ ಕೆಲಸಕ್ಕೆ ಬರುವ ಸಾರ್ವಜನಿಕರು ಪರದಾಡುವಂತಗಿದೆ.
ಅಶೋಕ ರಸ್ತೆ ಮತ್ತು ಕಾಲ್ ಟೆಕ್ಸ್ ಮಾರ್ಗವಾಗಿ ಬರುವವರು ನೇರವಾಗಿ ಈ ಮುಖ್ಯದ್ವಾರದ ಮೂಲಕ ಪಾಲಿಕೆಯ ಆವರಣವನ್ನ ಪ್ರವೇಶಿಸುತ್ತಿದ್ರು. ಆದ್ರೆ ಇದೀಗ ಸುತ್ತು ಹಾಕಿಕೊಂಡು ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಗೇಟ್ ಮೂಲಕ ಪಾಲಿಕೆಗೆ ಎಂಟ್ರಿಕೊಡಬೇಕಾಗಿದೆ. ಜೊತೆಗೆ ಪಾಲಿಕೆಯ ಮುಖ್ಯದ್ವಾರ ಬಂದ್ ಆಗಿರೋದ್ರಿಂದ ವಾಹನಗಳಲ್ಲಿ ಬಂದಂತ ಸಾರ್ವಜನಿಕರು ಗೇಟ್ ಮುಂದೆ ತಮ್ಮ ವಾಹನಗಳನ್ನು ನಿಲ್ಲಿಸಿ ಮಹಾನಗರ ಪಾಲಿಕೆ ಒಳಗೆ ಹೋಗ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಗೆ ಹೆಬ್ಬಾಗಿಲಾಗಿದ್ದ ಗೇಟ್ ಇದೀಗ ಪಾರ್ಕಿಂಗ್ ಜಾಗವಾಗಿ ಬದಲಾಗಿದೆ.
ಇನ್ನು ಕಾಮಗಾರಿ ಮುಗಿದು ತಿಂಗಳೇ ಕಳೆದರೂ ಇನ್ನು ಈ ಗೇಟನ್ನ ಮಾತ್ರ ತೆರೆದಿಲ್ಲ. ಇದರಿಂದ ದಿನನಿತ್ಯ ಸಂಚರಿಸುವ ಅಧಿಕಾರಿಗಳಿಗೆ ಹಾಗೂ ಪಾಲಿಕೆಗೆ ಬರುವ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗ್ತಾ ಇದೆ. ಹೀಗಾಗಿ ಇನ್ನಾದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಗೇಟ್ ತೆಗೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ್ಬೇಕಿದೆ.