ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಅಂದ್ರೆ ದ್ರಾಕ್ಷಿ ಬೆಳೆಯಲು ಫೇಮಸ್. ಯುವ ರೈತನೊಬ್ಬ ತಾನಾಯ್ತು, ತನ್ನ ವ್ಯವಸಾಯ ಆಯ್ತು ಎಂದು ಕೃಷಿಯಲ್ಲಿ ತೊಡಗಿಕೊಂಡಿದ್ದ, ಸಾಲಸೂಲ ಮಾಡಿ ದ್ರಾಕ್ಷಿ ತೋಟವನ್ನು ಹಾಕಿ ಬಂಗಾರದ ಬೆಲೆ ಕಾಯ್ತಾ ಇದ್ದ. ಆದ್ರೆ, ಯಾರ ಕಣ್ಣು ಬಿತ್ತೋ ಏನು. ರೈತನ ದ್ರಾಕ್ಷಿ ತೋಟಕ್ಕೆ ಯಾರೋ ವಾಮಾಚಾರ ಮಾಡಿ ಹೋಗಿದ್ದು, ದ್ರಾಕ್ಷಿ ಬೆಳೆ ಕಟಾವು ಮಾಡಲು ಯಾರು ಬರ್ತಿಲ್ಲ ಅಂತಾ ರೈತ ಕಂಗಾಲಾಗಿ ಕೂತಿದ್ದಾನೆ.
ಹೀಗೆ ದ್ರಾಕ್ಷಿ ತೋಟದಲ್ಲಿ ಅರಿಶಿನ ಕುಂಕುಮ, ಮೊಟ್ಟೆ ನಿಂಬೆ ಹಣ್ಣು ಇಟ್ಟು ಮಾಟಮಂತ್ರ ಮಾಡಿರುವಂತೆ ಕಾಣುತ್ತಿರುವ ದೃಶ್ಯಗಳು. ಮತ್ತೊಂದು ಕಡೆ ಇದಕ್ಕಿದಂತೆ ಒಣಗುತ್ತಿರುವ ದ್ರಾಕ್ಷಿ ಗಿಡಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ.. ಗ್ರಾಮದ ಯುವ ರೈತ ಪ್ರಭಾಕರ್ ಸಾಲಸೂಲ ಮಾಡಿ ಎರಡುವರೆ ಎಕರೆಯಲ್ಲಿ ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದ, ಇನ್ನೇನು ದ್ರಾಕ್ಷಿ ಕಟವಿಗೆ ಬಂದಿದ್ದು, ಈ ಬಾರೀ ಒಳ್ಳೆ ಆದಾಯದ ನಿರೀಕ್ಷೆ ಯಲ್ಲಿ ಇದ್ದ ರೈತ. ಆದ್ರೆ ತೋಟದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ ದ್ರಾಕ್ಷಿ ತೋಟಕ್ಕೆ ವಾಮಚಾರ ಮಾಡಿಸಿದ್ದಾರೆ ಅಂತಾ ಯುವ ರೈತ ಪ್ರಭಾಕರ್ ಆರೋಪ ಮಾಡಿದ್ದಾರೆ. ಅಲ್ದೇ ದ್ರಾಕ್ಷಿ ತೋಟದಲ್ಲಿನ ಕೃಷಿ ಹೊಂಡ, ದ್ರಾಕ್ಷಿ ಗಿಡಗಳ ಕೆಳ ಭಾಗದಲ್ಲಿ ಮೊಟ್ಟೆ, ನಿಂಬೆ ಹಣ್ಣು, ಅರಿಶಿನ ಕುಂಕುಮ ಹೂಗಳನ್ನು ಇಟ್ಟು ಕ್ಷುದ್ರ ಪೂಜೆಯನ್ನು ಮಾಡಿಸಿರುವ ದೃಶ್ಯಗಳನ್ನು ಕಂಡು ರೈತ ಪ್ರಭಾಕರ್ ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಇನ್ನೂ ವಾಮಚಾರ ಮಾಡಲಾಗಿದೆ ಅಂತ ರೈತ ಪ್ರಭಾಕರ್ ಆರೋಪ ಮಾಡ್ತಾ ಇದ್ರೆ. ಮತ್ತೊಂದು ಕಡೆ ದ್ರಾಕ್ಷಿ ತೋಟವನ್ನು ಖರೀದಿ ಮಾಡಲು ವರ್ತಕರು ಯಾರು ಸಹಾ ಇತ್ತ ಕಾಲು ಇಡ್ತಾ ಇಲ್ಲ ಅಂತ ರೈತ ಬೇಸರ ವ್ಯಕ್ತಪಡಿಸಿದ್ದಾನೆ. ಮತ್ತೊಂದು ಕಡೆ ಇದಕ್ಕಿದಂತೆ ದ್ರಾಕ್ಷಿ ಗಿಡಗಳು, ಹಣ್ಣುಗಳು ಒಣಗಿ ಕೊಳೆಯುತ್ತಿದೆ. ಇದ್ರಿಂದ ಕಂಗಾಲಾದ ರೈತ ಪ್ರಭಾಕರ್ ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯ ನಂದಿಗಿರಿ ಧಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ಮನವಿ ಮಾಡಿದ್ದಾರೆ.
ಅದೇನೆ ಆಗಲಿ ಕಷ್ಟ ಪಟ್ಟು ಕೆಲಸ ಮಾಡಿ ಮೇಲೆ ಬರ್ತಾ ಇದ್ದಾರೆ ಅಂದ್ರೆ ಅದ್ಯಾಕೋ ನಮ್ಮ ಜನಕ್ಕೆ ಹೊಟ್ಟೆ ಉರಿ. ಸಾಲಸೂಲ ಮಾಡಿ ದ್ರಾಕ್ಷಿಯನ್ನು ಬೆಳೆದು ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದ ಯುವ ರೈತನ ಪಾಲಿಗೆ ಮಾಟಮಂತ್ರದಿಂದ ಜೀವನ ಬೀದಿಗೆ ಬಿದ್ದಂತಾಗಿರೋದು ಮಾತ್ರ ದುರಂತವೇ ಸರಿ.