ಗುಬ್ಬಿ : ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಗಣಗೆ ಶುರುವಾಗಿದ್ದು, ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಲಾಗ್ತಿದೆ. ಆಗ್ನೇಯ ಪದವೀಧರರದ ಜೆಡಿಯು ಅಭ್ಯರ್ಥಿ ಡಾ.ನಾಗರಾಜು ಪರ ಗುಬ್ಬಿಯಲ್ಲಿ ಪ್ರಚಾರ ಮಾಡಲಾಯ್ತು. ನಾಗರಾಜು ಪರ ಮಹಿಮಾ ಪಟೇಲ್ ಪ್ರಚಾರ ನಡೆಸಿದ್ರು.
ಜೆಡಿಯು ಅಭ್ಯರ್ಥಿ ಡಾ. ನಾಗರಾಜು ಪರ ಪ್ರಚಾರ ಸಂಬಂಧ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಭ್ರಷ್ಟಾಚಾರ ವಿರುದ್ಧ ಹಾಗೂ ಜನತಾ ಪಕ್ಷದ ಸಿದ್ಧಾಂತ ಅಳವಡಿಸಿ ಸಾವಯವ ರಾಜ್ಯ ಕಟ್ಟಲು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜು ಅವರನ್ನು ಆಯ್ಕೆ ಮಾಡಿ ಜಿಲ್ಲೆಯಲ್ಲಿ ತಾಲ್ಲೂಕಿನ ಪ್ರವಾಸ ಗುಬ್ಬಿಯಿಂದ ಆರಂಭಿಸಿದ್ದೇವೆ ಎಂದ್ರು. ಆತಂಕದ ವಾತಾವರಣ ಸೃಷ್ಟಿಯಾಗಿರೋ ಈ ಸಮಯದಲ್ಲಿ ಇಡೀ ಜಗತ್ತು ಗಾಬರಿಯಿಂದ ಕೂಡಿದೆ. ಈ ಕೆಟ್ಟ ವಾತಾವರಣದಲ್ಲಿ ತಂಗಾಳಿಯಾಗಿ ಜೆಡಿಯು ಪಕ್ಷ ಜನರಿಗೆ ಸಮಾಧಾನ ತರಲು ಸರ್ವೋದಯ ಪರಿಕಲ್ಪನೆಯ ಯೋಜನೆ ರೂಪಿಸಿಕೊಂಡಿದೆ. ಮುಂದಿನ ಎಲ್ಲಾ ಚುನಾವಣೆಯಲ್ಲಿ ಹಣ ಹೆಂಡ ಇಲ್ಲದೆ ಗೆಲ್ಲುವ ಚಿಂತನೆ ಜನರಲ್ಲಿ ಮೂಡಿಸಲು ಬದಲಾವಣೆ ಜಗದ ನಿಯಮ ಅಂತ ಜಾಗೃತಿ ನಡೆಸಿದ್ದೇವೆ ಎಂದ್ರು.
ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಮಾತನಾಡಿ, ಸರ್ವೋದಯ ಆಲೋಚನೆ ಮೂಲಕ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹ, ಎನ್ ಪಿಎಸ್ ಬದಲಿಗೆ ಓಪಿಎಸ್ ಪದ್ಧತಿ ಜಾರಿಗೆ ಒತ್ತಾಯ, ಅತಿಥಿ ಉಪನ್ಯಾಸಕರ ಹಾಗೂ ಶಿಕ್ಷಕರ ಸೇವಾ ಭದ್ರತೆ, ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮುಂತಾದ ಬೇಡಿಕೆ ಈಡೇರಿಕೆಗೆ ಬದ್ಧನಾಗಿ ದುಡಿಯುತ್ತೇನೆ. ಈ ನಿಟ್ಟಿನಲ್ಲಿ ಆಶೀರ್ವದಿಸಿ ಎಂದು ಮನವಿ ಮಾಡಿದ್ರು.
ಈ ಸಂದರ್ಭದಲ್ಲಿ ಜೆಡಿಯು ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಪ್ರಧಾನ ಕಾರ್ಯದರ್ಶಿಗಳಾದ ರಂಗನಾಥ್, ಯಶೋಧ, ಯುವ ಘಟಕದ ರಾಜ್ಯ ಉಪಾಧ್ಯಕ್ಷೆ ಮೈನಾವತಿ, ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.