Sira : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಳಾಗ್ತಿದೆ ನಗರದ ಅಂಬೇಡ್ಕರ್ ಪಾರ್ಕ್

SIRA : ಪ್ರತಿ ಜಿಲ್ಲೆ, ತಾಲೂಕಿನಲ್ಲಿಯೂ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗಿರುತ್ತೆ. ಪಾರ್ಕ್‌ ಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಿರಿಯರು, ಮಹಿಳೆಯರು ವಾಕಿಂಗ್‌ ಮಾಡಲು ಬರುತ್ತಾರೆ. ಇಂತಹ ಪಾರ್ಕ್‌ಗಳ ಅಭಿವೃದ್ಧಿ, ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ನಗರಸಭೆ, ಪುರಸಭೆ, ಪಾಲಿಕೆಗಳು ಹೊತ್ತಿರುತ್ತೆ. ಕೆಲವೊಮ್ಮೆ ಅಧಿಕಾರಿಗಳು ತೋರುವ ನಿರ್ಲಕ್ಷ್ಯದಿಂದಾಗಿ ಪಾರ್ಕ್‌ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತವೆ. ಇದಕ್ಕೆ ಪೂರಕವೆಂಬಂತೆ ಶಿರಾದಲ್ಲಿರುವ ಅಂಬೇಡ್ಕರ್‌ ಪಾರ್ಕ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೊರಗುತ್ತಿದ್ದು, ದಲಿತಪರ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿರಾ ನಗರದಲ್ಲಿ ಹಲವಾರು ಉದ್ಯಾನಗಳಿವೆ. ಬಹುತೇಕ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ. ಉದ್ಯಾನಗಳಲ್ಲಿ ಕುರುಚಲು ಗಿಡಗೆಂಟೆಗಳು ಬೆಳೆದಿದ್ದು, ಅನೈತಿಕ ಚಟುವಟಿಕೆಗಳ ಕೇಂದ್ರ ಗಳಾಗಿವೆ ಬದಲಾಗುತ್ತಿವೆ ಅನ್ನೋ ಆರೋಪ ಕೇಳಿಬರ್ತಿದೆ. ಕೆಲವಂತೂ ‘ಉದ್ಯಾನವನ’ ಅನ್ನೋ ಹೆಸರಿಗೆ ಕಪ್ಪುಚುಕ್ಕೆಯಂತೆ ಇವೆ. ನಗರದಲ್ಲಿ ಅಂಬೇಡ್ಕರ್ ಉದ್ಯಾನ ನಿರ್ಮಿಸಲಾಗಿದೆ. ಈ ಪಾರ್ಕ್‌ಗೆ ಪ್ರತಿನಿತ್ಯ ಸಾವಿರಾರು ಜನ ಬರ್ತಾರೆ. ಆದರೆ ಈ ಪಾರ್ಕಿನಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಪಾರ್ಕ್‌ನಲ್ಲಿ ಹಾಕಲಾಗಿರುವ ಬೆಂಚುಗಳು ಮುರಿದುಬಿದ್ದಿದ್ದು, ಹಿರಿಯರು ಕೂರಲು ಪರದಾಡುತ್ತಿದ್ದಾರೆ.  ಅತ್ತ ಮಕ್ಕಳು ಆಟವಾಡಲು ಇರುವ ಪರಿಕರಗಳು ಕೂಡ ಹಾಳಾಗಿವೆ. ಮತ್ತೊಂದೆಡೆ ಯುವಕ ಯುವತಿಯ ಲವ್‌ ಸ್ಪಾಟ್‌ ಆಗಿ ಕೂಡ ಮಾರ್ಪಟ್ಟಿದೆ. ಲವರ್ಸ್‌ ಗಳ ಕಾಟಕ್ಕೆ ವಾಯು ವಿಹಾರಕ್ಕೆ ಬರುವ ಜನರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.

ಇನ್ನು ಈ ಬಗ್ಗೆ ಸ್ಥಳೀಯರಾದ ಮಂಜುನಾಥ್‌ ಮಾತನಾಡಿ, ಅಂಬೇಡ್ಕರ್‌ ಪಾರ್ಕ್‌ನಲ್ಲಿ ದಿನೇ ದಿನೇ ಹಾಳಾಗುತ್ತಿದೆ. ಇಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿದೆ. ಪ್ರತಿನಿತ್ಯ ಇಲ್ಲಿಗೆ ಶಾಲಾ-ಕಾಲೇಜಿನ ಹುಡುಗ ಹುಡುಗಿಯರು ಬರುತ್ತಾರೆ. ಅವರ ಆಟಾಟೋಪಕ್ಕೆ ಕಡಿವಾಣ ಇಲ್ಲದಂತಾಗಿದೆ. ಪಾರ್ಕ್‌ಗೆ ಬರುವವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಕೂರಲು ಬೆಂಚ್‌ಗಳಿಲ್ಲ. ಸರಿಯಾದ ನಿರ್ವಹಣೆ ಇಲ್ಲದೆ ಕಸದ ಗುಂಡಿಯಾಗುತ್ತಿದೆ. ಅಧಿಕಾರಿಗಳಿಗೆ ಪಾರ್ಕ್‌ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ರಾಜಸಿಂಹ ಮಾತನಾಡಿ, 1991 ರಲ್ಲಿ ಈ ಅಂಬೇಡ್ಕರ್‌ ಪಾರ್ಕ್‌ ನಿರ್ಮಿಸಲಾಗಿದೆ. ಇದುವರೆವಿಗೂ ಪಾರ್ಕ್‌ ಡೆವಲೆಪಮೆಂಟ್‌ ಆಗಿಲ್ಲ. ಪ್ರತಿ ವರ್ಷವೂ ಸರ್ಕಾರದಿಂದ ಅಭಿವೃದ್ಧಿ ಹಣ ಬಿಡುಗಡೆಯಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಅಂಬೇಡ್ಕರ್‌ ಪಾರ್ಕ್‌ ಅಭಿವೃದ್ಧಿ ಮಾಡುವ ಮನಸ್ಸು ಮಾಡುತ್ತಿಲ್ಲ. ಇತ್ತ ದಲಿತಪರ ಸಂಘಟನೆಗಳು ಅಂಬೇಡ್ಕರ್‌ ಹೆಸರಿನ ಪಾರ್ಕ್‌ ಉಳಿಸಿಕೊಳ್ಳಲು ಮುಂದಾಗುತ್ತಿಲ್ಲ ಅನ್ನೋದು ಬೇಸರ ಸಂಗತಿ ಎಂದರು.

ಅದೇನೇ ಇರಲಿ ಪಾರ್ಕ್‌ಗಳು ಅಂದರೆ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಒಳ್ಳೆಯ ಗಾಳಿಯನ್ನು ಸಾರ್ವಜನಿಕರಿಗೆ ನೀಡುತ್ತದೆ. ಆದರೆ ಅಧಿಕಾರಿಗಳು ಮಾಡುವ ಯಡವಟ್ಟಿನಿಂದಾಗಿ ಶಿರಾದಲ್ಲಿರುವ ಅಂಬೇಡ್ಕರ್‌ ಪಾರ್ಕ್‌ ಇಂದು ಗಬ್ಬೆದ್ದು ನಾರುತ್ತಿದೆ. ಪಾರ್ಕ್‌ನೊಳಗೆ ಸಂಚರಿಸಲು ದಾರಿ ಮಾಡಲಾಗಿದೆ. ಆದರೆ ನಿರ್ವಹಣೆ ಇಲ್ಲದೆ ಕೊಳಚೆ ನೀರು ನಿಂತು ರೋಗಗ್ರಸ್ಥ ಪಾರ್ಕ್‌ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಂಬೇಡ್ಕರ್‌ ಉದ್ಯಾನವನ್ನು ಉಳಿಸುವ ಕೆಲಸ ಮಾಡಿ, ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.

Author:

...
Sushmitha N

Copy Editor

prajashakthi tv

share
No Reviews