SHIVAMOGGA NEWS : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರದ ಸೆಟ್ಗೆ ಭಾರಿ ಗಾಳಿ ಮಳೆಯಿಂದ ಹಾನಿ ಉಂಟಾಗಿದೆ. ಈ ಘಟನೆದಲ್ಲಿ ಯಾವುದೇ ಕಲಾವಿದರಿಗೆ ಅಥವಾ ಶೂಟಿಂಗ್ ಸಿಬ್ಬಂದಿಗೆ ಏನೂ ಅಪಾಯವಾಗಿಲ್ಲ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟಪಡಿಸಿದೆ.
ಇನ್ನು ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್ ಅವರು ಈ ಕುರಿತು ಪ್ರತಿಕ್ರಿಯಿಸಿ, “ಸೆಟ್ ಹಾಕಿದ್ದ ಸ್ಥಳದಿಂದ ಶೂಟಿಂಗ್ ಸ್ಥಳ ಬಹಳ ದೂರದಲ್ಲಿದೆ. ಸೆಟ್ ಹಾನಿಗೊಳಗಾದರೂ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ತಂಡ ಸಂಪೂರ್ಣ ಸುರಕ್ಷಿತವಾಗಿದೆ. ಇಂದು ಸಹ ಚಿತ್ರೀಕರಣ ಕಾರ್ಯ ಚುರುಕಾಗಿ ನಡೆದಿದೆ,” ಎಂದು ತಿಳಿಸಿದ್ದಾರೆ.
ಮಾಣಿ ಹಿನ್ನೀರಿನ ಬಳಿಯಲ್ಲಿಯೇ ಚಿತ್ರೀಕರಣ ನಡೆಯುತ್ತಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಅವರು, “ಜಲಾಶಯ ಪಕ್ಕದಲ್ಲಿ ಯಾವುದೇ ರೀತಿಯ ಚಿತ್ರೀಕರಣ ನಡೆದಿಲ್ಲ. ಪರಿಸರದ ಸುತ್ತಮುತ್ತ ಕಾನೂನುಬದ್ಧವಾಗಿ ಶೂಟಿಂಗ್ ನಡೆಯುತ್ತಿದೆ,” ಎಂದರು. ಇನ್ನು ಚಿತ್ರ ತಂಡವು ಸ್ಥಳೀಯ ಪೊಲೀಸ್ ಇಲಾಖೆ, ಪಂಚಾಯತ್ ಹಾಗೂ ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದೆ ಎಂದು ಕೂಡ ಅವರು ತಿಳಿಸಿದ್ದಾರೆ.